ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಎಚ್.ಆರ್.ಕೃಷ್ಣಮೂರ್ತಿ ಅಂಕಣ| ಹುಲ್ಲುಗಾವಲು ಮತ್ತು ಚಿತ್ರನಗರಿ

ಹೆಸರಘಟ್ಟದ ಬಳಿ ಚಿತ್ರನಗರಿ ಸ್ಥಾಪನೆಯ ವಿರೋಧಕ್ಕೆ ಬಲವಾದ ಕಾರಣಗಳಿವೆ
Last Updated 7 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರಿಗೆ ಸಮೀಪವಾಗಿ ಫಿಲ್ಮ್ ಸಿಟಿ ಅಥವಾ ಚಿತ್ರನಗರಿ ಇರಬೇಕೆಂಬುದು ಕನ್ನಡ ಚಲನಚಿತ್ರ ರಂಗ ದವರ ಬಹುದಿನಗಳ ಬೇಡಿಕೆ. ಅಂತಹ ಚಿತ್ರನಗರಿಯೊಂದನ್ನು ನಿರ್ಮಿಸುವ ಸೂಚನೆ ಮೊದಲ ಬಾರಿಗೆ ಬಂದದ್ದು ಸುಮಾರು ನಾಲ್ಕು ದಶಕಗಳ ಹಿಂದೆ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ. ಅಲ್ಲಿಂದ ಮುಂದೆ ಬಂದ ಎಲ್ಲ ಸರ್ಕಾರಗಳೂ ಆ ಬಗ್ಗೆ ಆಶ್ವಾಸನೆ ನೀಡಿದರೂ ಚಿತ್ರನಗರಿ ನಿರ್ಮಾಣದ ಸ್ಥಳ ಮಾತ್ರ ಬದಲಾಗುತ್ತಲೇ ಹೋಯಿತು.

ಬೆಂಗಳೂರಿನ ಸಮೀಪದ ಹೆಸರಘಟ್ಟದಿಂದ ಪ್ರಾರಂಭವಾಗಿ, ಮೈಸೂರು, ರಾಮನಗರ, ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟುಗಳನ್ನೆಲ್ಲ ಸುತ್ತಿ ಇದೀಗ ಮತ್ತೊಮ್ಮೆ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನ ಹೊರವಲಯದ ಹೆಸರಘಟ್ಟದ 150 ಎಕರೆ ಪ್ರದೇಶದಲ್ಲಿ ನಿರ್ಮಾಣದ ಯೋಚನೆ ನಡೆದಿದೆ. 2020-21ರ ಬಜೆಟ್ಟಿನಲ್ಲಿ ₹ 500 ಕೋಟಿ ಮೀಸಲಿಡಲಾಗಿದೆ.

ಡಾ. ಎಚ್.ಆರ್.ಕೃಷ್ಣಮೂರ್ತಿ
ಡಾ. ಎಚ್.ಆರ್.ಕೃಷ್ಣಮೂರ್ತಿ

ಪ್ರತಿಬಾರಿ ಚಿತ್ರನಗರಿಯ ಪ್ರಸ್ತಾಪ ಬಂದಾಗಲೂ ಅದಕ್ಕಾಗಿ ಆಯ್ದುಕೊಂಡ ಸ್ಥಳದ ಬಗ್ಗೆ ಪರಿಸರ ಸಂಘಟನೆಗಳಿಂದ ಆಕ್ಷೇಪಣೆ, ಪ್ರತಿಭಟನೆಗಳು ಬಂದಿವೆ. ಹೆಸರಘಟ್ಟದ ಬಳಿ ಚಿತ್ರನಗರಿಯ ಪ್ರಸ್ತಾಪಕ್ಕೆ ಈ ಹಿಂದೆಯೂ ಪ್ರತಿಭಟನೆ ನಡೆದಿದ್ದು ಅದರ ಕಾವು ಇಂದಿಗೂ ಜೀವಂತವಾಗಿದೆ. ಪ್ರತಿಭಟನೆಗೆ ಬಲವಾದ ಕಾರಣಗಳೂ ಇವೆ.

ಹೆಸರಘಟ್ಟ, ಬೆಂಗಳೂರಿನ ವಾಯವ್ಯ ದಿಕ್ಕಿನಲ್ಲಿ 30 ಕಿ.ಮೀ. ದೂರದಲ್ಲಿರುವ ಪ್ರದೇಶ. ನಂದಿಬೆಟ್ಟದಲ್ಲಿ ಜನ್ಮ ತಳೆದು, ಬೆಂಗಳೂರಿನ ದಿಕ್ಕಿನಲ್ಲಿ ಹರಿದು ಬರುವ ಮಾರ್ಗದಲ್ಲಿ ಸುಮಾರು 180 ಕೆರೆಗಳನ್ನು ತುಂಬಿಸುತ್ತಿದ್ದ ಅರ್ಕಾವತಿ ನದಿಗೆ, ಹೆಸರಘಟ್ಟದಲ್ಲಿ 1894ರಲ್ಲಿ ಕಟ್ಟೆಯೊಂದನ್ನು ಕಟ್ಟಿ, ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಬೆಂಗಳೂರಿಗೆ ಪೂರೈಸಲಾಗುತ್ತಿತ್ತು. ಅರ್ಕಾವತಿ ನದಿಯ ಜಲಾನಯನ ಪ್ರದೇಶಗಳಲ್ಲಾದ ಬೆಳವಣಿಗೆ
ಗಳಿಂದ ಹೆಸರಘಟ್ಟದ ಜಲಾಶಯ ಬತ್ತಲಾರಂಭಿಸಿದಾಗ 1933ರಲ್ಲಿ ತಿಪ್ಪಗೊಂಡನಹಳ್ಳಿಯ ಬಳಿ ಮತ್ತೊಂದು ಜಲಾಶಯ ನಿರ್ಮಾಣವಾಯಿತು. ಈಗ ಮಳೆಗಾಲವನ್ನು ಬಿಟ್ಟರೆ ವರ್ಷದ ಬಹುಭಾಗ ಒಣಗಿರುವ, ಹೆಸರಘಟ್ಟದ ಕೆರೆಯಂಗಳವನ್ನು ಸುತ್ತುವರಿದಿರುವ ಭೂಪ್ರದೇಶ, ಬೆಂಗಳೂರಿನ ಸಮೀಪ ಉಳಿದುಕೊಂಡಿರುವ ಕಟ್ಟಕಡೆಯ ಹುಲ್ಲುಗಾವಲಿನ ಆವಾಸ. ಜೀವಿ-ಪರಿಸ್ಥಿತಿ ದೃಷ್ಟಿಯಿಂದ ಅನನ್ಯವಾದ, ಜೀವವೈವಿಧ್ಯಗಳಿಂದ ತುಂಬಿದ ಸೂಕ್ಷ್ಮ ಪ್ರದೇಶ.

ನಲವತ್ತು ವರ್ಷಗಳ ಹಿಂದೆ ಚಿತ್ರನಗರಿಯ ಪ್ರಸ್ತಾಪ ಬರುವ ಮುಂಚಿನಿಂದಲೂ ಪಕ್ಷಿವೀಕ್ಷಕರು, ನಿಸರ್ಗಾ
ಸಕ್ತರು, ಪರಿಸರ ಸಂಘಟನೆಗಳು, ವಿಜ್ಞಾನಿಗಳು ಈ ಪ್ರದೇಶದಲ್ಲಿ ಅನೇಕ ಅಧ್ಯಯನಗಳನ್ನು ಕೈಗೊಂಡು,
ಫಲಿತಾಂಶಗಳನ್ನು ಸಂಶೋಧನಾ ಜರ್ನಲ್‍ಗಳಲ್ಲಿ ಪ್ರಕಟಿಸುತ್ತ ಬಂದಿದ್ದಾರೆ. ನಾಲ್ಕು ದಶಕಗಳ ಕಾಲ ಇಲ್ಲಿ ಪಕ್ಷಿವೀಕ್ಷಣೆ ನಡೆಸಿರುವ, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಸುಬ್ರಮಣ್ಯ, ಹೆಸರಘಟ್ಟದ ಹುಲ್ಲುಗಾವಲಿನ ಜೀವವೈವಿಧ್ಯಕ್ಕೆ ಸಂಬಂಧಿಸಿದ ಅಧ್ಯಯನಗಳ ಸಾರಾಂಶವನ್ನು ಸಿದ್ಧಪಡಿಸಿದ್ದಾರೆ. ಈ ಮೂಲದಂತೆ, ಇಲ್ಲಿ ಹುಲ್ಲುಗಾವಲು ಮತ್ತು ಕುರುಚಲು ಪೊದೆಗಳಿಗೆ ಸೇರಿದ 39 ಸಸ್ಯ ಪ್ರಭೇದಗಳು, 12 ಮರ ಪ್ರಭೇದಗಳು, 10 ವನ್ಯಸ್ಥಿತಿಯ ಸ್ತನಿಗಳು, 7 ಸರೀಸೃಪಗಳು, 13 ಉಭಯಚರಿಗಳು, 3 ಪ್ರಭೇದಗಳಿಗೆ ಸೇರಿದ ಜೇಡಗಳು, 255 ಪಕ್ಷಿ ಪ್ರಭೇದಗಳು, 101 ಪ್ರಭೇದಗಳ ಚಿಟ್ಟೆಗಳು ಮತ್ತು 395 ಪ್ರಭೇದಗಳಿಗೆ ಸೇರಿದ ಕೀಟಗಳನ್ನು ದಾಖಲಿಸಲಾಗಿದೆ. ನೂರು ವರ್ಷಗಳಿಂದ ನಮ್ಮ ದೇಶದಲ್ಲಿ ಕಾಣದೇ ಹೋಗಿದ್ದ ಲೆಸ್ಸರ್ ಫ್ಲೋರಿಕನ್ ಎಂಬ ಹಕ್ಕಿಯನ್ನು 2011ರಲ್ಲಿ ಇಲ್ಲಿ ದಾಖಲಿಸಲಾಯಿತು.

ಇಂತಹ ಅಸಾಧಾರಣ ಜೀವವೈವಿಧ್ಯವನ್ನು ಹೊಂದಿರುವ, ಕೆರೆಯಂಗಳವನ್ನೂ ಸೇರಿದ 5,000 ಎಕರೆ ಪ್ರದೇಶವನ್ನು, ವನ್ಯಜೀವಿ ಸಂರಕ್ಷಣಾ ಅಧಿನಿಯಮದ 36ಎ ಸೆಕ್ಷನ್ ಅಡಿಯಲ್ಲಿ, ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ’ವೆಂದು ಘೋಷಿಸಬೇಕೆಂಬ ಪ್ರಸ್ತಾವವೊಂದನ್ನು ನಿಸರ್ಗಾಸಕ್ತರ ತಂಡವು 2013- 14ರಲ್ಲಿ ಅರಣ್ಯ ಇಲಾಖೆಗೆ ಸಲ್ಲಿಸಿತು. ಇಲಾಖೆ ಈ ಪ್ರಸ್ತಾವದ ಬಗ್ಗೆ ಆಸಕ್ತಿ ತೋರಿದರೂ ಕಳೆದ ತಿಂಗಳು, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ. ಇದರೊಂದಿಗೆ ಕಳೆದ ವರ್ಷ, ಚಿತ್ರರಂಗದ ನಿಯೋಗಕ್ಕೆ ಮುಖ್ಯಮಂತ್ರಿ ನೀಡಿದ ಭರವಸೆಯಂತೆ ಚಿತ್ರನಗರಿಯ ನಿರ್ಮಾಣದ ಪ್ರಸ್ತಾಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಚಿತ್ರನಗರಿಯ ಯೋಜನೆ ಕೇವಲ ಪ್ರಸ್ತಾಪದ ಹಂತ ವನ್ನು ದಾಟಿ ಸ್ವಲ್ಪ ಮುಂದುವರಿದಿದ್ದು 2012ರಲ್ಲಿ, ಕರ್ನಾಟಕ ಸರ್ಕಾರ ಚಿತ್ರನಗರಿಯ ನಿರ್ಮಾಣಕ್ಕೆ ‘ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್’ಗಾಗಿ ಟೆಂಡರ್‌ಗಳನ್ನು ಕರೆದಾಗ. 2013ರಲ್ಲಿ, ಅರ್ಕಾವತಿ- ಕುಮುದ್ವತಿ ನದಿಗಳ ಪುನಶ್ಚೇತನ ಸಮಿತಿಯು ಈ ಎರಡೂ ನದಿಗಳ ಅತಿಮುಖ್ಯ ಜಲಾನಯನ ಪ್ರದೇಶವಾದ ಹೆಸರಘಟ್ಟದ ಹುಲ್ಲುಗಾವಲನ್ನು ರಕ್ಷಿಸಬೇಕೆಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಯನ್ನು ಹೂಡಿತು. 2015ರಲ್ಲಿ ರಾಜ್ಯ ಸರ್ಕಾರವು ಹೆಸರಘಟ್ಟದ ಭೂಮಿಯನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿತು. ಅಂತಿಮ ತೀರ್ಪು ನೀಡಿದ ನ್ಯಾಯಾಲಯವು ಅಂತಹ ನಿರ್ಧಾರವನ್ನು ಕೈಗೊಳ್ಳುವವರೆಗೂ ಹೆಸರಘಟ್ಟ ಯಥಾಸ್ಥಿತಿಯಲ್ಲಿರ
ಬೇಕೆಂಬ ಸೂಚನೆಯನ್ನು ನೀಡಿತು. ಸರ್ಕಾರ ನಿರ್ಧಾರ ಕೈಗೊಂಡಾಗ, ಅಗತ್ಯವೆನಿಸಿದರೆ, ಅಂತಹ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸ್ವಾತಂತ್ರ್ಯ ಅರ್ಜಿದಾರರಿಗಿದೆಯೆಂಬ ಅಂಶವನ್ನೂ ಅದು ಸ್ಪಷ್ಟ
ಪಡಿಸಿತು.

ಕರ್ನಾಟಕ ಜೀವವೈವಿಧ್ಯ ಮಂಡಳಿಯು ಹೆಸರಘಟ್ಟದ ಹುಲ್ಲುಗಾವಲಿನ ಅಸಾಧಾರಣ ಜೀವವೈವಿಧ್ಯದ ಸಂರಕ್ಷಣೆಯತ್ತ ಗಮನಹರಿಸಬೇಕೆಂಬುದು ಪರಿಸರ ಸಂಘಟನೆಗಳ ಕೋರಿಕೆ. ಇದರ ಜೊತೆಗೆ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳಗಳಿಂದ 24 ಟಿಎಂಸಿ ಅಡಿಯಷ್ಟು ನೀರನ್ನು ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅನಾವೃಷ್ಟಿಪೀಡಿತ ಪ್ರದೇಶಗಳಿಗೆ ಹರಿಸುವ ಮುಂಚೆ ಆ ನೀರನ್ನು ಸಂಗ್ರಹಿಸುವಲ್ಲಿ ಹೆಸರಘಟ್ಟದ ಕೆರೆಯಂಗಳ ಪ್ರಮುಖ ಪಾತ್ರ ವಹಿಸಲಿದೆಯೆಂಬುದು ನಿಸರ್ಗಾಸಕ್ತರ ವಾದ.

ಚಿತ್ರನಗರಿಯು ಚಿತ್ರೋದ್ಯಮಕ್ಕೆ ಪ್ರೋತ್ಸಾಹ ನೀಡಿ, ಚಿತ್ರೀಕರಣಕ್ಕೆ ಹೊರ ರಾಜ್ಯಗಳಿಗೆ ಹೋಗಬೇಕಾದ ಖರ್ಚು ವೆಚ್ಚಗಳನ್ನು ಸ್ವಲ್ಪ ಕಡಿಮೆ ಮಾಡಿ, ಸ್ಥಳೀಯವಾಗಿ ನೂರಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪರಿಸರ ಸಂಘಟನೆಗಳೂ ಅದನ್ನು ಒಪ್ಪುತ್ತವೆ. ಆದರೆ ಅವರ ವಿರೋಧವಿರುವುದು ಪರಿಸರಸೂಕ್ಷ್ಮವಾದ ಈ ಪ್ರದೇಶದಲ್ಲೇ ಚಿತ್ರನಗರಿಯನ್ನು ನಿರ್ಮಿಸುವ ಪ್ರಸ್ತಾಪಕ್ಕೆ. ಚಿತ್ರನಗರಿ ಕೇವಲ ಒಂದು ನೆಪ ಮಾತ್ರ. ಭೂಮಾಫಿಯಾದ ಗಮನವಿರುವುದು ಬೆಂಗಳೂರಿಗೆ ಸಮೀಪವಾಗಿ ಚಿನ್ನದ ಬೆಲೆಯಿರುವ 5,000 ಎಕರೆಗಳ ಭೂಮಿಯ ಮೇಲೆ ಎಂಬ ಅಭಿಪ್ರಾಯವೂ ಇದೆ. ಚಿತ್ರನಗರಿಯನ್ನು ಅಭಿವೃದ್ಧಿಯಿಲ್ಲದೇ ಸೊರಗುತ್ತಿರುವ ಕರ್ನಾಟಕದ ಬೇರೆ ಭಾಗಗಳಲ್ಲಿ, ಪರಿಸರಕ್ಕೆ ಹಾನಿಯಾಗದಂತೆ ನಿರ್ಮಿಸಬಹುದೆಂಬ ಅಭಿಪ್ರಾಯ ಚಿತ್ರರಂಗದ ಕೆಲವು ಹಿರಿಯರಿಂದಲೇ ಬಂದಿರುವುದನ್ನು ಗಮನಿಸಬೇಕು.

ಕೆಲವೊಂದು ಪ್ರಭೇದಗಳ ಹಕ್ಕಿ, ಹಾವು, ಸಸ್ಯ ಗಳು ಕಣ್ಮರೆಯಾಗುತ್ತವೆಂಬ ಕಾರಣಕ್ಕೆ ಅಭಿವೃದ್ಧಿ ಯೋಜನೆಗಳನ್ನೇ ಕೈಬಿಡಬೇಕೆ ಎಂಬುದು ಆಗಾಗ ಕೇಳಿಬರುವ ಪ್ರಶ್ನೆ. ಜೀವ ವಿಜ್ಞಾನಿ ಪೌಲ್ ಎರಿಕ್ ಈ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ: ಅರಣ್ಯ, ಜಲಾಶಯಗಳಂತಹ ನೀರಿನಾಸರೆ, ಹುಲ್ಲುಗಾವಲು ಮುಂತಾದ ಪ್ರತಿಯೊಂದು ಜೀವಾವಾಸವೂ ಒಂದು ವಿಮಾನವಿದ್ದಂತೆ. ನಾವು ಅದರಲ್ಲಿನ ಪ್ರಯಾಣಿಕರು. ವಿಮಾನದ ರೆಕ್ಕೆಗಳನ್ನು ಎತ್ತಿ ಹಿಡಿದಿರುವ ರಿವೆಟ್ಟು, ಮೊಳೆ, ಸ್ಕ್ರೂಗಳನ್ನು ನಾವು, ಒಂದರ ನಂತರ ಒಂದರಂತೆ ತೆಗೆಯುತ್ತ ಹೋಗು ತ್ತಿದ್ದೇವೆ. ಕೊನೆಗೆ ಯಾವ ರಿವೆಟ್ ತೆಗೆದಾಗ ವಿಮಾನ ನೆಲಕ್ಕುರುಳುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯ
ವಿಲ್ಲವಾದರೂ ಕಟ್ಟಕಡೆಗೆ ಯಾವುದೋ ಒಂದು ಮೊಳೆ ಆ ಕೆಲಸವನ್ನು ಮಾಡುತ್ತದೆ. ಕಣ್ಮರೆಯಾಗುವ ಪ್ರತಿಯೊಂದು ಪ್ರಭೇದವೂ ವಿಮಾನದಿಂದ ಹೊರತೆಗೆದ ಮತ್ತೊಂದು ರಿವೆಟ್ ಮೊಳೆಯಂತೆ. ನಮ್ಮ ಭವಿಷ್ಯದ ದೃಷ್ಟಿಯಿಂದ ವಿವೇಕದಿಂದ ನಡೆದುಕೊಳ್ಳಬೇಕಾದ ಅಗತ್ಯವನ್ನು ಈ ಉತ್ತರ ಸ್ಪಷ್ಟವಾಗಿ ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT