ಪಾಂಡವರ ಮೇಲೆ ಕೌರವರಿಗೆ ವಿನಾ ಕಾರಣ ದ್ವೇಷವಿತ್ತು. ಇಂಥ ದ್ವೇಷಬುದ್ಧಿ ಕೇವಲ ಪುರಾಣಕಾಲದಲ್ಲಿ ಮಾತ್ರವಲ್ಲ, ಸಮಾಜದಲ್ಲಿ ಈಗಲೂ ಯಥೇಚ್ಛವಾಗಿಯೇ ಇದೆ. ನಮ್ಮ ದೇಶದ ಬಗ್ಗೆಯೇ ಯೋಚಿಸಬಹುದು. ಭಾರತ ತಾನಾಗಿ ಯಾವುದೇ ದೇಶದ ಮೇಲೆ ಆಕ್ರಮಣವನ್ನು ಮಾಡಿಲ್ಲ. ಆದರೆ ನಮ್ಮ ದೇಶವನ್ನು ದ್ವೇಷಿಸುವ ರಾಷ್ಟ್ರಗಳಿಗೆ ಕೊರತೆಯೇನಿಲ್ಲ. ಇದು ದುಷ್ಟಬುದ್ಧಿಯಲ್ಲದೆ ಇನ್ನೇನು? ಇತ್ತೀಚೆಗೆ ಚೀನಾದೇಶ ನಮ್ಮ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದದ್ದು ಇದಕ್ಕೊಂದು ಉದಾಹರಣೆ. ಇನ್ನು ಪಾಕಿಸ್ತಾನದ ವಿಷಯವನ್ನು ಹೇಳುವುದೇ ಬೇಡ; ಅದರ ಅಸ್ತಿತ್ವ ಇರುವುದೇ ಭಾರತದ ಮೇಲೆ ಅದು ಸದಾ ಕಾರುತ್ತಲೇ ಬಂದಿರುವ ದ್ವೇಷದ ಮೇಲೆ. ಇದಕ್ಕಿಂತಲೂ ದುಷ್ಟತನ ಬಗ್ಗೆ ಇನ್ನೊಂದು ಉದಾಹರಣೆ ಬೇಕಿಲ್ಲವೆನ್ನಿ!