ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಪುರುಷ ಪ್ರಯತ್ನ

Last Updated 1 ಅಕ್ಟೋಬರ್ 2020, 1:44 IST
ಅಕ್ಷರ ಗಾತ್ರ

ಅಶ್ವಸ್ಯ ಲಕ್ಷಣಂ ವೇಗೋ ಮದೋ ಮಾತಂಗಲಕ್ಷಣಮ್‌ ।

ಚಾತುರ್ಯ ಲಕ್ಷಣಂ ನಾರ್ಯಾ ಉದ್ಯೋಗಃ ಪುರುಷಲಕ್ಷಣಮ್‌ ।।

ಇದರ ತಾತ್ಪರ್ಯ ಹೀಗೆ:

‘ಕುದುರೆಗೆ ವೇಗವೂ ಆನೆಗೆ ಮದವೂ ನಾರಿಗೆ ಜಾಣ್ಮೆಯೂ ಪುರುಷನಿಗೆ ಉದ್ಯೋಗವೂ ಲಕ್ಷಣ.’

ಒಂದೊಂದು ಜೀವಿಗೂ ಅದರದ್ದೇ ಆದ ವಿಶೇಷ ಗುಣ–ಸ್ವಭಾವಗಳು ಇರುತ್ತವೆ. ಈ ವಿಶೇಷ ಗುಣದ ಕಾರಣದಿಂದಾಗಿಯೇ ಆ ಜೀವಿಗೆ ಬೆಲೆ ಇರುವುದು ಕೂಡ. ಹೀಗೆಯೇ ಮನುಷ್ಯನಿಗೂ ಲಕ್ಷಣ ಇದೆ; ಅದನ್ನು ಅವನು ಯಾವುದೆಂದು ಕಂಡುಕೊಂಡು ಅದನ್ನು ತನ್ನದನ್ನಾಗಿಸಿಕೊಳ್ಳಬೇಕು. ಆಗಲೇ ಅವನಿಗೆ ಬೆಲೆ.

ಕುದುರೆಯ ವಿಶೇಷತೆ ಇರುವುದು ಅದರ ಓಟದಲ್ಲಿ. ಹೀಗಾಗಿ ಅದೇ ಅದರ ಲಕ್ಷಣ. ಆನೆಯ ಬಲಕ್ಕೆ ಸೂಚಕ ಅದರ ಮದಶಕ್ತಿ; ಹೀಗಾಗಿ ಅದೇ ಅದರ ಲಕ್ಷಣ. ಇದು ಪ್ರಾಣಿಗಳ ವಿಷಯವಾಯಿತು.

ಮನುಷ್ಯರಲ್ಲಿರುವ ವಿಶೇಷ ಏನು? ಹೆಣ್ಣಿಗೆ ಜಾಣ್ಮೆಯೇ ಲಕ್ಷಣ. ಏಕೆಂದರೆ ಇಡಿಯ ಸಂಸಾರದ ಅಡಿಪಾಯವೇ ಅವಳಾಗಿರುವುದರಿಂದ. ಗಂಡಿಗೆ ಉದ್ಯೋಗವೇ ಲಕ್ಷಣ ಎಂದಿದೆ ಸುಭಾಷಿತ.

ಗಂಡು ಹೊರಗೆ ಹೋಗಿ ದುಡಿದು ಸಂಪಾದನೆ ಮಾಡಬೇಕು; ಹೆಣ್ಣು ಮನೆಯ ವ್ಯವಹಾರವನ್ನು ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗಬೇಕು – ಎನ್ನುವುದೇ ಆದರ್ಶವಾಗಿದ್ದ ಕಾಲದ ಮಾತು ಇದು. ಈಗ ಕಾಲ ಬದಲಾಗಿದೆ; ಗಂಡು ಮಾತ್ರ ಹೊರಗೆ ಹೋಗಿ ದುಡಿದು ಬರಬೇಕೆ? ಹೆಣ್ಣು ಏಕೆ ದುಡಿಯಲು ಹೋಗಬಾರದು? ಮನೆಯ ಹೊಣೆಗಾರಿಕೆಯನ್ನು ಗಂಡು ಏಕೆ ನೋಡಿಕೊಳ್ಳಬಾರದು? ಹೀಗೆಲ್ಲ ಪ್ರಶ್ನೆಗಳು ಇಲ್ಲಿ ಉದ್ಭವವಾಗಬಹುದು.

ಹೆಣ್ಣು ಹೊರಗೆ ಹೋಗಿ ದುಡಿಯಬೇಕು – ಎಂಬ ವಾದಕ್ಕೆ ಸುಭಾಷಿತದಿಂದ ಯಾವ ತಕರಾರೂ ಇಲ್ಲವೆನ್ನಿ! ಹೆಣ್ಣು ದುಡಿದು ತಂದರೆ ಗಂಡು ಮನೆಯ ಕೆಲಸಗಳನ್ನು ಜಾಣ್ಮೆಯಿಂದ ನಿರ್ವಹಿಸಬೇಕು. ಒಟ್ಟಿನಲ್ಲಿ ಸಂಸಾರ ಸೌಹಾರ್ದವಾಗಿರಬೇಕು; ಕಷ್ಟಪಟ್ಟು ದುಡಿದು ಅನ್ನವನ್ನು ಸಂಪಾದಿಸಬೇಕು; ಬುದ್ಧಿವಂತತನದಿಂದ ಕುಟುಂಬವನ್ನು ಮುನ್ನಡೆಸಬೇಕು ಎಂಬುದಷ್ಟೇ ಇಲ್ಲಿಯ ಇಂಗಿತ.

ಪುರುಷಪ್ರಯತ್ನ ಎಂದರೆ ಅದು ಗಂಡಸಿಗೆ ಮಾತ್ರವೇ ಸೇರಿದ್ದಲ್ಲ; ಮನುಷ್ಯರೆಲ್ಲರಿಗೂ ಸೇರಿದ್ದು. ಹೀಗಾಗಿ ಪುರುಷಪ್ರಯತ್ನದಿಂದ ಸುಂದರವೂ ಸುಖಮಯವೂ ಆದ ಜೀವನವನ್ನು ಹೆಣ್ಣು–ಗಂಡು ರೂಪಿಸಿಕೊಳ್ಳಬೇಕು ಎಂಬುದೇ ಇಲ್ಲಿರುವ ತುಡಿತ.

ಇನ್ನೊಂದು ಸುಭಾಷಿತದ ಮಾತುಗಳನ್ನು ನೋಡಿ:

ಉದ್ಯೋಗಿನಂ ಪುರುಷಸಿಂಹಮುಖೈತಿ ಲಕ್ಷ್ಮೀಃ

ದೈವೇನ ದೇಯಮಿತಿ ಕಾಲಪುರುಷಾ ವದಂತಿ ।

ದೈವಂ ನಿಹಿತ್ಯ ಕುರು ಪೌರುಷಮಾತ್ಮಶಕ್ತ್ಯಾ

ಯತ್ನೇ ಕೃತೇ ಯದಿ ನ ಸಿಧ್ಯತಿ ಕೋsತ್ರ ದೋಷಃ ।।

ಇದರ ತಾತ್ಮರ್ಯ:

‘ಉದ್ಯೋಗಶೀಲನಾದ ಪುರುಷನನ್ನು ಲಕ್ಷ್ಮಿಯು ತಾನಾಗಿ ವರಿಸುತ್ತಾಳೆ. ಕೈಲಾಗದವರು ದೇವರೇ ಸಹಾಯ ಒದಗಿಸಬೇಕೆಂದು ಬಯಸುವರು. ದೈವವನ್ನು ಒಂದು ಕಡೆಗಿಟ್ಟು ಪುರುಷಪ್ರಯತ್ನವನ್ನು ಮಾಡು; ಪ್ರಯತ್ನಪಟ್ಟ ಬಳಿಕವೂ ಫಲ ಸಿಗದಿದ್ದಾಗ ದೋಷಕ್ಕೆ ಜಾಗ ಇರುವುದಿಲ್ಲ.’

ನಮ್ಮ ಪ್ರಯತ್ನವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು; ಆಗ ವಿಫಲವಾದರೂ ಅದು ಫಲವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT