ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಕಟ್ಟುವ ಕೆಲಸ

Last Updated 18 ನವೆಂಬರ್ 2020, 1:00 IST
ಅಕ್ಷರ ಗಾತ್ರ

ಘಾತಯಿತುಮೇವ ನೀಚಃ ಪರಕಾರ್ಯಂಸು ವೇತ್ತಿ ನ ಪ್ರಸಾಧಯಿತುಮ್ ।

ಪಾತಯಿತುಮಸ್ತಿ ಶಕ್ತಿರ್ವಾಯೋರ್ವೃಕ್ಷಂ ನ ಚೋನ್ನಮಿತುಮ್‌ ।।

ಇದರ ತಾತ್ಪರ್ಯ ಹೀಗೆ:

‘ಮತ್ತೊಬ್ಬನ ಕೆಲಸವನ್ನು ಕೆಡಿಸುವುದಕ್ಕಾಗಿ ಮಾತ್ರ ನೀಚನಿಗೆ ಗೊತ್ತಾಗುತ್ತದೆಯೇ ಹೊರತು ಅದನ್ನು ಸಾಧಿಸುವುದಕ್ಕಲ್ಲ. ಗಾಳಿಗೆ ಮರವನ್ನು ಉರುಳಿಸಲು ಶಕ್ತಿಯಿದೆ; ಆದರೆ ಅದನ್ನು ಎತ್ತಿ ನಿಲ್ಲಿಸುವುದಕ್ಕಲ್ಲ.’

ಸುಭಾಷಿತ ಹೇಳಿರುವಂಥ ವ್ಯಕ್ತಿಗಳನ್ನು ನಾವೆಲ್ಲರೂ ಪ್ರತಿ ದಿನವೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಣುತ್ತಲೇ ಇರುತ್ತೇವೆ.

ಮನೆಯನ್ನು ಕಟ್ಟುವುದು ಕಷ್ಟದ ಕೆಲಸ; ಆದರೆ ಕೆಡವುವುದು ಸುಲಭದ ಕೆಲಸ. ಹೀಗೆಯೇ ಸಮಾಜವನ್ನು ಕಟ್ಟುವುದು ಕಷ್ಟದ ಕೆಲಸ; ಸಮಾಜವನ್ನು ಒಡೆಯವುದು ಸುಲಭದ ಕೆಲಸ. ಯಾವಾಗಲೂ ಕಷ್ಟದ ಕೆಲಸವನ್ನು ಮಾಡುವವರ ಸಂಖ್ಯೆ ಸಮಾಜದಲ್ಲಿ ಕಡಿಮೆ; ಸುಲಭದ ಕೆಲಸವನ್ನು, ಅದರಲ್ಲೂ ಒಡೆಯುವ ಕೆಲಸ – ಅದು ಸುಲಭದಲ್ಲಿಯೇ ಸುಲಭವಾದುದು – ಮಾಡಲು ಜನರು ನಾ ಮುಂದು ತಾ ಮುಂದು – ಎಂದು ಸಿದ್ಧರಾಗಿನಿಲ್ಲುತ್ತಾರೆ, ಅಲ್ಲವೆ? ಅದನ್ನೇ ಸುಭಾಷಿತ ಹೇಳುತ್ತಿರುವುದು. ಹೀಗೆ ಮನೆಯನ್ನೂ ಸಮಾಜವನ್ನೂ ಒಡೆಯುವವರನ್ನು ಅದು ನೀಚರು ಎಂದು ಸರಿಯಾಗಿಯೇ ಕರೆದಿದೆ. ನೀಚರ ಸ್ವಭಾವವೇ ಇನ್ನೊಬ್ಬರಿಗೆ ಕಷ್ಟವನ್ನು ಕೊಡುವುದು:ಗಾಳಿಗೆ ಮರವನ್ನು ಉರುಳಿಸಲು ಶಕ್ತಿಯಿದೆ; ಆದರೆ ಅದನ್ನು ಎತ್ತಿ ನಿಲ್ಲಿಸುವುದಕ್ಕಲ್ಲ.

ರಾಜಕಾರಣದಲ್ಲೂ ಈ ನೀಚರ ಹಾವಳಿಯನ್ನು ಹೆಚ್ಚಾಗಿಯೇ ನೋಡಬಹುದು. ಯಾವ ಪಕ್ಷವೇ ಪ್ರತಿಪಕ್ಷದಲ್ಲಿರಲಿ, ಅದು ಆಡಳಿತ ಪಕ್ಷ ಮಾಡಲು ಹೊರಡುವ ಎಲ್ಲ ಕಾರ್ಯಗಳನ್ನೂ ವಿರೋಧಿಸುತ್ತದೆ. ಮಾತ್ರವಲ್ಲ, ಅದು ತನ್ನ ಸ್ವಾರ್ಥಕ್ಕಾಗಿ ದೊಂಬಿಗಳನ್ನೂ ಸೃಷ್ಟಿಸುತ್ತದೆ. ರಾಷ್ಡ್ರನಿರ್ಮಾಣವೇ ನಮ್ಮ ಗುರಿಯಾಗಿರಬೇಕು – ಎಂಬ ಆದರ್ಶವನ್ನು ಎಲ್ಲ ರಾಜಕೀಯ ಪಕ್ಷಗಳೂ ಮರೆತು ಕೇವಲ ನೀಚಮಟ್ಟದ ರಾಜಕಾರಣದಲ್ಲಿಯೇ ಮುಳುಗಿರುತ್ತವೆ.

ಕೆಲವೊಂದು ಕುಟುಂಬಗಳಲ್ಲಿಯೂ ಇಂಥ ನೀಚರು ಇರಬಹುದು. ಇವರು ಮನೆಯ ಏಳಿಗೆಯನ್ನು ಸಹಿಸುವುದಿಲ್ಲ; ಎಲ್ಲರ ಸಂತೋಷವನ್ನು ಕಂಡು ಸಂತೋಷಪಡುವಂಥ ಮಾನಸಿಕತೆಯೂ ಇವರಿಗೆ ಇರುವುದಿಲ್ಲ. ಮನೆಯ ಸದಸ್ಯರ ನಡುವೆಯೇ ಜಗಳಗಳನ್ನು ಸೃಷ್ಟಿಸುತ್ತಿರುತ್ತಾರೆ. ಇಂಥ ಗೃಹಭಂಜಕರು ನೀಚರಲ್ಲದೆ ಮತ್ತೇನು? ಮನೆಯಲ್ಲಿ, ಕಚೇರಿಯಲ್ಲಿ, ಕಲಾಪ್ರಪಂಚದಲ್ಲಿ – ಎಲ್ಲೆಲ್ಲಿ ಮನುಷ್ಯರು ಇರುತ್ತಾರೋ, ಅಲ್ಲೆಲ್ಲ ಇಂಥ ನೀಚರು ಇದ್ದೇ ಇರುತ್ತಾರೆ; ನಾವು ಎಚ್ಚರಿಕೆಯಿಂದ ಇರಬೇಕಷ್ಟೆ.

ನಾವು ಕೂಡ ಆಗಾಗ ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕು – ನಾವು ಇನ್ನೊಬ್ಬರ ಏಳಿಗೆಯನ್ನು ಕಂಡು ಸಂತೋಷ ಪಡುತ್ತಿದ್ದೇವೆಯೋ? ಅಥವಾ ಸಂಕಟ ಪಡುತ್ತಿದ್ದೇವೆಯೋ? ಕುಟುಂಬವನ್ನು ನಿಲ್ಲಿಸುವ ಕೆಲಸ ನಮ್ಮಿಂದ ಆಗುತ್ತಿದೆಯೋ? ಮನೆಯನ್ನು ಮುಳುಗಿಸುವ ಕೆಲಸ ಆಗುತ್ತಿದೆಯೋ? ಸಮಾಜಕ್ಕೂ ರಾಷ್ಡ್ರಕ್ಕೂ ನನ್ನಿಂದ ಏನಾದರೂ ಉಪಯೋಗ ಆಗುತ್ತಿದದೆಯೋ? ಹಾನಿ ಆಗುತ್ತಿದೆಯೋ? – ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಒಳಿತಿನ ಕಡೆಗೆ ಹೆಜ್ಜೆ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT