ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದುರ್ಜನರ ಸಂಗ

Last Updated 17 ಜನವರಿ 2021, 1:12 IST
ಅಕ್ಷರ ಗಾತ್ರ

ವರ್ಜನೀಯೋ ಮತಿಮತಾ ದುರ್ಜನಃ ಸಖ್ಯವೈರಯೋಃ ।

ಶ್ವಾ ಭವತ್ಯುಪಘಾತಾಯ ಲಿಹನ್ನಪಿ ದಶನ್ನಪಿ ।।

ಇದರ ತಾತ್ಪರ್ಯ ಹೀಗೆ:

‘ಬುದ್ಧಿವಂತನಾದವನು ಸ್ನೇಹ ಮತ್ತು ದ್ವೇಷ – ಇವೆರಡರಿಂದಲೂ ದುರ್ಜನನನ್ನು ದೂರ ಮಾಡಬೇಕು. ಇದು ಹೇಗೆಂದರೆ, ನಾಯಿ ನೆಕ್ಕಿದರೂ ಅಷ್ಟೆ, ಕಚ್ಚಿದರೂ ಅಷ್ಟೆ – ಅಪಘಾತವೇ ಆಗುವುದು.’

ಕೆಟ್ಟವರ ಹತ್ತಿರವೇ ಸುಳಿಯಬಾರದು ಎಂದು ಸುಭಾಷಿತ ಹೇಳುತ್ತಿದೆ; ಅವರ ಸ್ನೇಹವೂ ಬೇಡ, ದ್ವೇಷವೂ ಬೇಡ – ಎಂಬುದು ಅದರ ನಿಲವು.

ಕೆಟ್ಟವರ ಸ್ಥಾಯಿಗುಣವೇ ಕೇಡುತನ. ಇಂಥವರ ಜೊತೆ ಸ್ನೇಹ ಮಾಡಿದರೂ ತೊಂದರೆಯೇ, ದ್ವೇಷ ಮಾಡಿದರೂ ತೊಂದರೆಯೇ. ಇವರ ಜೊತೆ ಮಾಡುವ ಸ್ನೇಹ ಯಾವಾಗ ಬೇಕಾದರೂ ಅದು ದ್ವೇಷ ಆಗಬಹುದು; ಇನ್ನು ದ್ವೇಷವಂತೂ ಸರಿಯೇ ಸರಿ! ವಾಸ್ತವದಲ್ಲಿ ದುರ್ಜನರು ಯಾರೊಂದಿಗೂ ಸ್ನೇಹ ಮಾಡಲಾರರು. ಏಕೆಂದರೆ ಸ್ನೇಹದಲ್ಲಿ ನಂಬಿಕೆ–ವಿಶ್ವಾಸಗುಣಗಳು ಪ್ರಧಾನವಾಗಿರುತ್ತವೆ. ಆದರೆ ದುರ್ಜನ ತನ್ನನ್ನು ಬಿಟ್ಟು ಇನ್ನೊಬ್ಬರನ್ನು ನಂಬಲಾರ; ತನ್ನ ಬಗ್ಗೆಯಲ್ಲದೆ ಇನ್ನೊಬ್ಬರ ಒಳಿತಿನ ಬಗ್ಗೆ ಯೋಚಿಸಲಾರ. ಸ್ವಾರ್ಥ ಒಂದೇ ಅವನ ಸಹಜಗುಣ. ಇಂಥವನ ಸ್ನೇಹವನ್ನು ಹೇಗೆ ನಂಬುವುದು? ದುರ್ಜನರ ಲಕ್ಷಣವನ್ನು ಇನ್ನೊಂದು ಸುಭಾಷಿತ ಹೀಗೆ ಹೇಳಿದೆ:

‘ಮುಖಂ ಪದ್ಮದಲಾಕಾರಂ ವಾಣೀ ಚಂದನಶೀತಲಾ ।

ಹೃದಯಂ ಕರ್ತರೀತುಲ್ಯಂ ತ್ರಿವಿಧಂ ಧೂರ್ತಲಕ್ಷಣಮ್‌ ।।

’ಮುಖ ಪದ್ಮದಳದಂತೆ ಸೊಗಸಾಗಿರುತ್ತದೆ, ಮಾತು ಶ್ರೀಗಂಧದಂತೆ ತಂಪಾಗಿರುತ್ತದೆ, ಹೃದಯವು ಕತ್ತರಿಯಂತೆ ಹರಿತವಾಗಿರುತ್ತದೆ – ಇವು ಮೂರು ಧೂರ್ತರ ಲಕ್ಷಣ’ ಎಂಬುದು ಈ ಪದ್ಯದ ತಾತ್ಪರ್ಯ.

ಇನ್ನೊಂದು ಸುಭಾಷಿತವು ದುರ್ಜನರ ಸ್ವಭಾವ ಹೇಗೆ ಸಮಯಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ ಎಂಬುದನ್ನು ಹೀಗೆ ಹೇಳುತ್ತಿದೆ:

ಸಂಪತ್ತೌ ಕರ್ಕಶಂ ಚಿತ್ತಂ ಖಲಸ್ಯಾಪದಿ ಕೋಮಲಮ್‌ ।

ಶೀತಲಂ ಕಠಿನಂ ಪ್ರಾಯಸ್ತಪ್ತಂ ಮೃದು ಭವತ್ಯಯಃ ।।

’ಕೆಟ್ಟವನ ಮನಸ್ಸು ಸಂಪತ್ತಿದ್ದಾಗ ಕರ್ಕಶ, ಆಪತ್ತು ಬಂದಾಗ ಕೋಮಲ; ತಣ್ಣಗಿರುವಾಗ ಕಬ್ಬಿಣ ಕಠೋರ, ಬಿಸಿಯಾದಾಗ ಮೃದು‘ ಎನ್ನುತ್ತಿದೆ ಈ ಸುಭಾಷಿತ.

ದುರ್ಜನ ಎಂಬುವನು ಇದ್ದಿಲಿನಂತೆ; ಬಿಸಿಯಾಗಿದ್ದಾಗ ಕೆಂಡ, ತಣ್ಣಗಿದ್ದಾಗ ಮಸಿ. ಹೀಗಾಗಿ ದುರ್ಜನರ ಹತ್ತಿರವೂ ಸುಳಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT