ಮನುಷ್ಯನ ಎಲ್ಲ ಬೆಳವಣಿಗೆಗೆ ಮನಸ್ಸೇ ಮುಖ್ಯ ಕಾರಣವಾಗಿರುತ್ತದೆ. ನಮ್ಮ ಮನಸ್ಸು ಸದಾ ಪ್ರಸನ್ನತೆಯಿಂದ ಕೂಡಿದ್ದರೆ ಮೃದುತ್ವ ಬರುತ್ತದೆ. ನಾವು ಲಿಂಗಪೂಜೆ ಮಾಡಿಕೊಳ್ಳುವಾಗ ಲಿಂಗಯ್ಯನಿಗೆ ಪುಷ್ಪವನ್ನು ಅರ್ಪಿಸುತ್ತೇವೆ. ಕಾರಣ ನಮ್ಮ ಮನಸ್ಸು ಪುಷ್ಪದಂತೆ ಮೃದುವಾಗಬೇಕು. ಸುಂದರವಾಗಬೇಕು. ಹಾಗೆ ಇರದಿದ್ದರೆ ‘ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು’ ಎಂಬ ಅಕ್ಕನ ಅಮರವಾಣಿ ನಮ್ಮನ್ನು ಎಚ್ಚರಿಸುತ್ತದೆ.
ಮನಸ್ಸು ಹೂವಿನಂತೆ ಮೃದುವಾಗಿರುವುದೆಂದರೆ ಬಡವರನ್ನು ಕಂಡರೆ ಅವರಿಗೆ ಅನುಕಂಪದಿಂದ ಸಹಾಯ ಮಾಡಬೇಕು. ತನಗಿಂತ ದೊಡ್ಡವರು ಕಂಡರೆ ಗೌರವ ಭಾವ ತಾಳಬೇಕು. ನಮ್ಮ ನೆರೆಹೊರೆಯವರು ತನಗಿಂತ ಎತ್ತರ ಬೆಳೆದರೆ ಅಭಿಮಾನ ಪಡಬೇಕು.
ನಾವು ತಲೆ ಮಾಸಿದಾಗ ತಲೆ ತೊಳೆದುಕೊಳ್ಳುತ್ತೇವೆ. ಬಟ್ಟೆ ಮಾಸಿದಾಗ ಬಟ್ಟೆ ಒಗೆದು ಸ್ವಚ್ಛ ಮಾಡಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ಮನಸ್ಸು ಆಗಾಗ್ಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಷಡ್ವಿಕಾರದಿಂದ ಮಾಸುತ್ತಿರುತ್ತದೆ. ಮನಸ್ಸು ಮಾಸಿದಾಗ ಶರಣರ ವಚನಗಳಿಂದ ಅನುಭಾವ ಮಾಡಿದಾಗ ಮನಸ್ಸು ಸ್ವಚ್ಛವಾಗುತ್ತದೆ. ಮೃದುವಾಗುತ್ತದೆ. ಎಲ್ಲರನ್ನು ಪ್ರೀತಿಸುವ ಭಾವ ನಿರ್ಮಾಣವಾಗುತ್ತದೆ. ತನ್ನ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ವ್ಯಕ್ತಿ ವಿಶ್ವಕುಟುಂಬಿಯಾಗುತ್ತಾನೆ. ಮನ ಘನಮನ ಮಾಡಿಕೊಂಡಾಗ ಮೃದುತ್ವ ತಾನೆ ಬರುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.