ನಾವು ತಲೆ ಮಾಸಿದಾಗ ತಲೆ ತೊಳೆದುಕೊಳ್ಳುತ್ತೇವೆ. ಬಟ್ಟೆ ಮಾಸಿದಾಗ ಬಟ್ಟೆ ಒಗೆದು ಸ್ವಚ್ಛ ಮಾಡಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ಮನಸ್ಸು ಆಗಾಗ್ಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಷಡ್ವಿಕಾರದಿಂದ ಮಾಸುತ್ತಿರುತ್ತದೆ. ಮನಸ್ಸು ಮಾಸಿದಾಗ ಶರಣರ ವಚನಗಳಿಂದ ಅನುಭಾವ ಮಾಡಿದಾಗ ಮನಸ್ಸು ಸ್ವಚ್ಛವಾಗುತ್ತದೆ. ಮೃದುವಾಗುತ್ತದೆ. ಎಲ್ಲರನ್ನು ಪ್ರೀತಿಸುವ ಭಾವ ನಿರ್ಮಾಣವಾಗುತ್ತದೆ. ತನ್ನ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ವ್ಯಕ್ತಿ ವಿಶ್ವಕುಟುಂಬಿಯಾಗುತ್ತಾನೆ. ಮನ ಘನಮನ ಮಾಡಿಕೊಂಡಾಗ ಮೃದುತ್ವ ತಾನೆ ಬರುತ್ತದೆ.