ಬೀದರ್: ನಾವೆಲ್ಲರೂ ದೇವರ ಮಕ್ಕಳು ಎಂಬ ಭಾವ ಹೃದಯದಲ್ಲಿ ತುಂಬಿಕೊಂಡು ಪರಸ್ಪರ ಪ್ರೀತಿ, ಪ್ರೇಮ, ಸಹೋದರತ್ವ, ಸಮಾನತೆಯಿಂದ ಬಾಳಿದರೆ ಅದುವೆ ಶಿವಾಚಾರ. ನಾನು ಹೆಚ್ಚು ನೀನು ಕಡಿಮೆ ನಿನಗಿಂತಲೂ ನಾನು ಶ್ರೇಷ್ಠ ಎಂಬ ಅಹಂ ಯಾವಾಗಲೂ ಸಮಾಜದ ಅಧೋಗತಿಗೆ ಕಾರಣವಾಗುತ್ತದೆ. ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ. ಆದರೂ ನಾವು ಭೇದ-ಭಾವ ಮಾಡಿದರೆ ದೇವರು ಮೆಚ್ಚುವುದಿಲ್ಲ. ಸಕಲ ಜೀವಾತ್ಮರಿಗೆ ಲೇಸು ಬಯಸುವುದೇ ಶಿವಾಚಾರ. “ಇವನಾರವ ಇವನಾರವ” ಎನ್ನದೆ ಎಲ್ಲರೂ ನಮ್ಮವರು ಎಂಬ ಭಾವದಿಂದ ಬಾಳಿದರೆ ನಾವು ವಿಶ್ವಕುಟುಂಬಿಯಾಗುತ್ತೇವೆ. ವಿಶ್ವವೆಲ್ಲವೂ ದೇವನ ಸೃಷ್ಟಿಯಾಗಿದೆ. ನಾವು ನಡೆಯುವ ಭೂಮಿ, ಕುಡಿಯುವ ನೀರು, ಉಸಿರಾಡುವ ಗಾಳಿ ಒಂದೇಯಾಗಿರುವಾಗ ಮತ್ತೆ ಏಕೆ ಭೇದ ಮಾಡುವುದು. ಅದಕ್ಕೆ ಬಸವಣ್ಣನವರು ಹೇಳುತ್ತಾರೆ, “ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ” “ದಾಸಿಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದಕೊಂಬುದೆ ಯೋಗ್ಯ”. ಈ ವಚನ ವಾಣಿ ಶಿವಾಚಾರದ ನಡೆಯನ್ನು ತೋರಿಸುತ್ತದೆ.