ಭಗವಂತನ ಪೂಜೆಗೆ ಶ್ರದ್ಧೆ–ನಿಷ್ಠೆಯೇ ಮುಖ್ಯವಾಗಬೇಕೆ ಹೊರತು ಪೂಜಿಸುವ ಸಮಯ, ಕಾಲ, ನಕ್ಷತ್ರ, ತಿಥಿಗಳು ಮುಖ್ಯವಲ್ಲ. ಯಾರಾದರೂ ಭಗವಂತನನ್ನು ಪೂಜಿಸುವ ಸಮಯ ಕೇಳಿದಾಗ, ನಾವು ರಾಶಿಗಳನ್ನು ನೋಡದೆ, ಚಂದ್ರಬಲ, ತಾರಾಬಲಗಳನ್ನು ನೋಡದೆ, ನಾಳೆ ನಾಡಿದ್ದು ಎನ್ನದೆ, ತತ್ಕ್ಷಣದ ಸಮಯವೆ ಶ್ರೇಷ್ಠ ಎನ್ನಬೇಕು ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸರ್ವರೂ ತಿಥಿ, ನಕ್ಷತ್ರ, ರಾಶಿಗಳನ್ನೆ ನೋಡಿಯೇ ಪೂಜಾದಿ ಕ್ರಿಯೆಗಳನ್ನು ಮಾಡುತ್ತಾರೆ. ಮನಸ್ಸಿನಲ್ಲಿ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಇಟ್ಟುಕೊಂಡು ನಾವು ಯಾವ ಸಮಯದಲ್ಲಾದರೂ ಭಗವಂತನ ಆರಾಧನೆ ಮಾಡಬಹುದು. ಅದಕ್ಕಾಗಿಯೇ ಇನ್ನೊಂದು ಕಡೆ ಶರಣ ನಿದ್ರೆಗೈದಡೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಎಂದಿದ್ದಾರೆ.