ದೇವರ ಮೇಲೆ ಇರುವ ನಂಬಿಕೆ, ಭಕ್ತಿ ಕೇವಲ ಗುಡಿಯಲ್ಲಿರುವ ದೇವರ ಮೇಲೆ ಇದ್ದರೆ ಸಾಲದು. ಪರಮಾತ್ಮ (ಸರ್ವಾಂತರಯಾಮಿ) ಎಲ್ಲ ಕಡೆಯೂ ಇದ್ದಾನೆ. ಅದಕ್ಕೆ ಬಸವಣ್ಣನವರು ತಮ್ಮ ವಚನದಲ್ಲಿ ‘ನಂಬಿ ಕರೆದೊಡೆ ಓ ಎನ್ನನೇ ಶಿವನು’ ಎಂದು ಬೋಧಿಸಿದ್ದಾರೆ.
‘ನಂಬಿ ಕೆಟ್ಟವರಿಲ್ಲವೋ ಜಗದಲ್ಲಿ ನಂಬದೆ ಕೆಟ್ಟರು’ ಎಂದು ಪುರಂದರ ದಾಸರು ಹೇಳಿದ ಮಾತು ಸತ್ಯವಾಗಿದೆ. ‘ನಂಬು ನಂಬಲೆ ಮನವೇ ಹಂಬಲಿಸದಿರು ಬರಿದೆ. ನಂಬುಗೆಯು ಕಾರಣವು ಸಾಂಬನೊಲಿಯುದಕ್ಕೆ’ ಎಂದು ಮಹಾತ್ಮರು ಹಾಡಿ ಭಕ್ತರನ್ನು ಎಚ್ಚರಿಸಿದ್ದಾರೆ. ಅದಕ್ಕಾಗಿ ಭಕ್ತರು ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಬೇಕು.
ದೇವರನ್ನು ಗುಡಿಯಲ್ಲೇ ಪೂಜಿಸಲಿ, ಹೊರಗೆ ಪೂಜಿಸಲಿ. ಆದರೆ,ಅದರ ನಿಷ್ಠೆ ಒಂದಾದರೆ ಮಾತ್ರ ಫಲ ದೊರೆಯುವುದು. ಭಗವಂತನನ್ನು ಭಜಿಸುವ ಭಕ್ತ ಎಲ್ಲಿದ್ದರೆನು? ಅವನು ತನ್ನ ಹೆಂಡತಿ, ಮಕ್ಕಳು, ಬಂಧುಗಳನ್ನು ಬಿಟ್ಟು ದೂರದ ಅರಣ್ಯದಲ್ಲಿ ಏಕಾಂತವಾಸಿಯಾಗಬೇಕಾಗಿಲ್ಲ.
ತಾನಿದ್ದಲ್ಲಿಯೇ ಶ್ರದ್ಧೆ, ನಿಷ್ಠೆಗಳಿಂದ ಪೂಜಿಸಿದರೆ ಅದರ ಫಲ ದೊರೆಯುವುದು. ಡೊಳ್ಳಿಗೆ ಹೊಡೆಯುವ ಪೆಟ್ಟು ಒಂದೇ ತೆರನಾಗಿರುವಂತೆ ಶಿವನನ್ನು ಪೂಜಿಸುವವನ ಪರಿ ಒಂದೇ ರೀತಿಯಲ್ಲಿರಬೇಕು. ಪೂಜಿಸುವ ವಿಧಾನ ಭಿನ್ನವಾಗಿದ್ದರೂ ದೇವರಿಗೆ ಅದು ಮುಖ್ಯವಲ್ಲ. ಮನಸ್ಸು, ನಿಷ್ಠೆ ಮುಖ್ಯ ಇದು ಸ್ಥಿರವಾಗಬೇಕು.
ಮನಸ್ಸಿನ ಚಂಚಲ ಪ್ರವೃತ್ತಿಯನ್ನು ಕಳೆದುಕೊಂಡರೆ ಪರಮಾತ್ಮನ ಪ್ರೀತಿಗೆ ಪಾತ್ರವಾಗುವರು. ಈ ಚಂಚಲ ಮನಸ್ಸನ್ನು ಸ್ಥಿರಗೊಳಿಸಿ ಎಲ್ಲಿ ಪ್ರಾರ್ಥಿಸಿದರು ದೇವರು ಪ್ರತ್ಯಕ್ಷನಾಗುವನು.
ಅಂತೆಯೇ, ದಾಸರು ‘ಹೆಸಿ ಗುಣಗಳನ್ನಿಟ್ಟುಕೊಂಡು ಕಾಶಿಗೆ ಹೋದಲ್ಲೇನೈತಿ’ ಎಂದು ಹಾಡಿಲ್ಲವೇ. ಅಂತೆಯೇ ಶಿವಶರಣರು ಭಕ್ತಿಯಿಲ್ಲದೆ ಅಲ್ಲಲ್ಲಿ ತಿರುಗುವ ಡಾಂಭಿಕರಿಗಾಗಿ ಮಾತಿನ ಚಾಟಿಯಿಂದ ಬೋಧಿಸಿದ್ದಾರೆ.