ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ 11-9-2022ರಿಂದ 17-9-2022ರವರೆಗೆ

Last Updated 10 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

**

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕೆಲವರ ಕೌಟುಂಬಿಕ ವಿವಾದಗಳು ರಾಜಿ ಸಂಧಾನದ ಮೂಲಕ ಪರಿಹಾರವಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ. ವ್ಯವಹಾರಗಳಲ್ಲಿ ನಿಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾಗಿ ವ್ಯವಹರಿಸುವುದರಿಂದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಗಳು ದೊರೆಯುತ್ತವೆ. ನರದೌರ್ಬಲ್ಯ ಇರುವವರು ಹೆಚ್ಚು ಎಚ್ಚರವಹಿಸಿರಿ. ಆರಂಭಿಸಿದ್ದ ಕೆಲವು ಕೆಲಸಗಳು ವಿರೋಧಿಗಳ ಚಿತಾವಣೆಯಿಂದ ನಿಲ್ಲಬಹುದು. ಕೃಷಿಯಿಂದ ಹೆಚ್ಚು ಆದಾಯ ಬರುತ್ತದೆ. ಕಬ್ಬಿಣದ ಕುಲುಮೆಗಳನ್ನು ನಡೆಸುವವರಿಗೆ ಹೆಚ್ಚಿನ ತಯಾರಿಕಾ ಆದೇಶಗಳು ದೊರೆತು ಲಾಭ ಹೆಚ್ಚುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಮಂದಗತಿಯ ವ್ಯಾಪಾರ ಇರುತ್ತದೆ. ಸಮೂಹದಲ್ಲಿ ಮಾತನಾಡುವಾಗ ಒರಟು ಮಾತುಗಳು ಖಂಡಿತ ಬೇಡ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವಂಶಪಾರಂಪರ್ಯದ ವೃತ್ತಿಯನ್ನು ಮುಂದುವರಿಸುವುದರಿಂದ ಆದಾಯ ಇರುತ್ತದೆ. ಕೆಲವು ರಾಜಕಾರಣಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಹೆಚ್ಚಿನ ಓಡಾಟವಿರುತ್ತದೆ. ನಿಮ್ಮ ಕೆಲವೊಂದು ಕೆಲಸಗಳಲ್ಲಿ ಅನುಭವದ ಕೊರತೆ ಎದುರಾಗಬಹುದು. ಮಾತಿನಲ್ಲಿ ಹಾಗೂ ವ್ಯವಹಾರದಲ್ಲಿ ನೀವು ತೋರುವ ದಕ್ಷತೆಯಿಂದ ವ್ಯವಹಾರದಲ್ಲಿ ಲಾಭ ಬರುತ್ತದೆ. ಕೃಷಿಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನಿಮ್ಮಲ್ಲಿದ್ದ ಸುಪ್ತ ಕಲೆಗಳು ಹೊರಬಂದು ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಹಿರಿಯರ ಮಧ್ಯಸ್ಥಿಕೆಯಿಂದ ಶುಭಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಪ್ರಮುಖ ಯೋಜನೆಗಳಿಗೆ ಕೈ ಹಾಕುವಾಗ ಅದರ ಬಗ್ಗೆ ಸರಿಯಾಗಿ ತಿಳಿಯುವುದು ಒಳ್ಳೆಯದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕಾರ್ಯದೊತ್ತಡದ ನಡುವೆಯೂ ಕುಟುಂಬದ ಕಡೆಗೆ ಗಮನ ಕೊಡುವುದು ಅಗತ್ಯ. ವೃತ್ತಿಯಲ್ಲಿ ಹೊಸ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳು ನಿಮಗೆ ಕೊಟ್ಟಾಗ ಜಾಣ್ಮೆಯಿಂದ ಒಪ್ಪಿಕೊಳ್ಳುವುದು ಒಳಿತು. ಮುದ್ರಣಕಾರರಿಗೆ ಪ್ರಮುಖ ಮುದ್ರಣದಲ್ಲಿ ಹೆಚ್ಚಿನ ತಪ್ಪಾಗುವ ಸಂದರ್ಭಗಳಿವೆ, ಎಚ್ಚರವಹಿಸಿರಿ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಸ್ವಲ್ಪ ಕುಂಠಿತವಾಗುವ ಸಂದರ್ಭಗಳಿವೆ, ಗಮನಕೊಡಿರಿ. ಉದ್ದಿಮೆದಾರರು ಸಹನೆಯ ಮಾತುಕತೆಯ ಮೂಲಕ ಅವರ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಹೆಚ್ಚಿನ ವಸ್ತು ಉತ್ಪಾದನೆಯನ್ನು ಮಾಡಿಕೊಳ್ಳಬಹುದು. ಅಗ್ನಿಶಾಮಕ ವಿಭಾಗದಲ್ಲಿ ಕೆಲಸ ಮಾಡುವವರು ಎಚ್ಚರವಾಗಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಯಂತ್ರಗಳ ಆಮದು-ರಫ್ತು ಮಾಡುವವರಿಗೆ ಹೆಚ್ಚಿನ ಮುನ್ನಡೆ ಇರುತ್ತದೆ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)
ಆಲಸ್ಯ ದೂರವಾಗಿ ಕೆಲಸಕಾರ್ಯಗಳಲ್ಲಿ ಅತಿಯಾದ ಉತ್ಸಾಹವನ್ನು ಕಾಣುವಿರಿ. ಕೆಲಸದಲ್ಲಿ ಬರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವುದು ಉತ್ತಮ. ಸ್ವತ್ತಿನ ಮಾರಾಟ ವಿಚಾರದಲ್ಲಿ ಹಿರಿಯರ ಮಾತಿನಂತೆ ನಡೆದು ಹೆಚ್ಚು ಲಾಭಾಂಶ ಪಡೆಯುವಿರಿ. ಸಹೋದರರಿಂದ ಆಸ್ತಿ ವಿಚಾರದಲ್ಲಿ ತಗಾದೆಗಳು ಬರಬಹುದು. ನಿಮ್ಮ ಯಾವುದೋ ವ್ಯವಹಾರದಲ್ಲಿ ಅನಿರೀಕ್ಷಿತ ಧನಾಗಮನ ಆಗುವ ಸಾಧ್ಯತೆ ಇದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಯಿದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭಾಂಶ ಹೆಚ್ಚುವ ಸಾಧ್ಯತೆ ಇದೆ. ದೇಹಾಯಾಸದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.

ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ವಸ್ತ್ರ ವಿನ್ಯಾಸದಲ್ಲಿ ಪರಿಣಿತಿಯನ್ನು ಪಡೆದಿರುವವರಿಗೆ ಬೇಡಿಕೆ ಬರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಜನರು ನಿಮ್ಮ ಸೇವೆಯನ್ನು ಗುರುತಿಸಿ ಗೌರವ ಕೊಡುವರು. ಕಾನೂನು ಶಾಸ್ತ್ರ ಅಧ್ಯಯನ ಮಾಡುತ್ತಿರುವವರಿಗೆ ಉತ್ತಮ ಫಲಿತಾಂಶವಿರುತ್ತದೆ. ಅಕ್ಕಪಕ್ಕದವರೊಡನೆ ಹೆಚ್ಚಿನ ಸ್ನೇಹದಿಂದ ಇರುವುದು ಬಹಳ ಒಳ್ಳೆಯದು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರುವುದಿಲ್ಲ. ನಿಮಗೆ ಉತ್ತಮ ಕೆಲಸ ಸಿಕ್ಕು ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸುವುದು. ನಿಮ್ಮ ತಪ್ಪು ಒಪ್ಪುಗಳನ್ನು ನೀವೇ ಕುಳಿತು ಪರಿಶೀಲಿಸಿ ಸರಿಪಡಿಸಿಕೊಳ್ಳುವುದು ಒಳಿತು. ಧಾರ್ಮಿಕ ಪ್ರವಚನ ಕೊಡುವವರಿಗೆ ಹೆಚ್ಚಿನ ಕಾರ್ಯಕ್ರಮಗಳು ದೊರೆಯುತ್ತವೆ. ಮೂಳೆ ತೊಂದರೆ ಇರುವವರು ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಬಹುದು. ಅಪರಿಚಿತರ ಬಳಿ ಎಚ್ಚರದಿಂದ ಇರಿ.

ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ಯೋಜನೆಗಳ ಬಗ್ಗೆ ಸರಿಯಾದ ತಿಳಿವಳಿಕೆ ನಿಮಗಿರಲಿ. ಉನ್ನತ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆಯಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕುಟುಂಬದ ಏಳಿಗೆಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಆಶಿಸುತ್ತಿದ್ದ ಆಸ್ತಿ ದೊರೆಯುವ ಸಂದರ್ಭವಿದೆ. ವಿದೇಶಕ್ಕೆ ಹೋಗಬೇಕೆನ್ನುವವರು ದಾಖಲಾತಿಗಳನ್ನು ಸರಿಯಾಗಿ ಇಟ್ಟು ಕೊಳ್ಳುವುದು ಉತ್ತಮ. ಕೃಷಿಕರಿಗೆ ಉತ್ತಮ ಬೆಳೆಯ ಯೋಗವಿದೆ. ಯಾವುದೇ ರೀತಿಯ ದ್ರವರೂಪದ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುವುದು. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಮನೆಪಾಠ ಮಾಡುವವರಿಗೆ ಹೆಚ್ಚಿನ ಶಿಷ್ಯರು ದೊರೆಯುತ್ತಾರೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು.

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಪಾಲುದಾರಿಕೆ, ಸಹಭಾಗಿತ್ವದ ವ್ಯವಹಾರಗಳಲ್ಲಿ ನಿಮಗೆ ಲಾಭವಿದೆ. ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ವ್ಯವಹಾರದಲ್ಲಿನ ಕೆಲವು ನಿರ್ಧಾರಗಳನ್ನು ನಿಮ್ಮ ಒಳಿತಿಗಾಗಿ ಬದಲಿಸಿ ಹೊಸ ನಿರ್ಧಾರ ಪ್ರಕಟಿಸುವ ಅಗತ್ಯ ಇರುತ್ತದೆ. ರಾಜಕೀಯ ನಾಯಕರುಗಳ ವಶೀಲಿಯಿಂದ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಓಡಾಡುತ್ತಿರಿ. ವ್ಯಾಪಾರದಲ್ಲಿ ಮಧ್ಯವರ್ತಿಗಳ ಉಪಟಳ ಇರುತ್ತದೆ, ಎಚ್ಚರಿಕೆವಹಿಸಿ. ಧಾರ್ಮಿಕ ಕಾರ್ಯಗಳನ್ನು ಮಾಡಿ ಹಣ ಸಂಪಾದನೆ ಮಾಡುವವರಿಗೆ ಹೆಚ್ಚಿನ ಸಂಪಾದನೆ ಇರುತ್ತದೆ. ನಿಮ್ಮ ಸಂಗಾತಿಯ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಕೃಷಿಭೂಮಿಯನ್ನು ಕೊಳ್ಳುವ ಆಸಕ್ತಿ ಇರುತ್ತದೆ. ಬಾಣಸಿಗರು ಬೆಂಕಿಯೊಡನೆ ಎಚ್ಚರದಿಂದ ಇರಿ. ಸಿದ್ಧಪಡಿಸಿದ ಆಹಾರವನ್ನು ಮಾರಾಟ ಮಾಡುವವರಿಗೆ ಲಾಭವಿರುತ್ತದೆ.

ವೃಶ್ಚಿಕ ರಾಶಿ ( ವಿಶಾಖಾ 4 ಅನುರಾಧ ಜೇಷ್ಠ)
ವೃತ್ತಿಯಲ್ಲಿ ಮೇಲಧಿಕಾರಿಯ ಮೃದು ವರ್ತನೆಯಿಂದ ನಿಮ್ಮ ಮೇಲಿನ ದೂರುಗಳು ನಿವಾರಣೆಯಾಗುವುದು. ನಿಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ನ್ಯಾಯವಾದಿಗಳಿಗೆ ಹೆಚ್ಚಿನ ಕೇಸ್‌ಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ವೈದ್ಯರ ಸಲಹೆಯಂತೆ ದೇಹಕ್ಕೆ ಪುಷ್ಟಿ ಕೊಡುವ ಆಹಾರ ಸೇವಿಸುವುದು ಒಳ್ಳೆಯದು. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ತೃಪ್ತಿ ಇರುತ್ತದೆ. ಧನದಾಯವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ. ಮಕ್ಕಳ ಬಗ್ಗೆ ಸಾಕಷ್ಟು ಸಂತೋಷದ ವಾರ್ತೆಗಳನ್ನು ಕೇಳುವಿರಿ. ಬಂಧುಗಳೊಡನೆ ಆತ್ಮೀಯತೆ ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಮಾತಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತದೆ. ಕೃಷಿ ವಿಸ್ತರಣೆಯನ್ನು ಮಾಡಲು ಮುಂದಾಗುವಿರಿ.

ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ವ್ಯವಹಾರದ ಕೆಲಸಗಳಿಂದಾಗಿ ಬಿಡುವಿಲ್ಲದೆ ದೇಹಶ್ರಮ ಆಗುವುದು. ನಿಮ್ಮ ಜೀವನ ಶೈಲಿಗೆ ತಕ್ಕಂತೆ ನಿರ್ಧಾರವನ್ನು ಈಗ ತೆಗೆದುಕೊಳ್ಳಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ತೆರಿಗೆ ತಜ್ಞರಿಗೆ ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿದ್ದು ಆದಾಯ ಹೆಚ್ಚುತ್ತದೆ. ವ್ಯಾವಹಾರಿಕ ವಿಷಯದಲ್ಲಿ ಪ್ರಯತ್ನಗಳು ಈಗ ಫಲ ಕೊಡಲಾರಂಭಿಸುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಬೇಕಾದ ಪರಿಕರಗಳು ದೊರೆಯುತ್ತವೆ. ಜವಾಬ್ದಾರಿಯುತ ಯೋಜನೆಯ ಅನುಷ್ಠಾನಕ್ಕೆ ಸರಿಯಾಗಿ ಆಲೋಚನೆ ಮಾಡಿರಿ. ನಿಮ್ಮ ಹಿತವಚನಗಳು ಅಥವಾ ನಾಜೂಕಿನ ಮಾತುಗಳು ಸಹೋದ್ಯೋಗಿಗಳಿಗೆ ಸಂತಸ ಕೊಡುತ್ತದೆ. ನಿಮ್ಮಿಂದ ಸಹಾಯ ಪಡೆದವರೇ ನಿಮ್ಮನ್ನು ದೂಷಿಸಬಹುದು. ಇಂತಹವರ ಬಗ್ಗೆ ಎಚ್ಚರದಿಂದ ಇರಿ. ಕ್ರೀಡಾಪಟುಗಳಿಗೆ ಉತ್ತಮ ಸಾಮರ್ಥ್ಯ ತೋರಿಸುವ ಅವಕಾಶ ದೊರೆಯುತ್ತದೆ.

ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣಧನಿಷ್ಠ 1.2)
ಬಹಳ ಶ್ರಮಪಟ್ಟು ಕೆಲಸ ಮಾಡುವಿರಿ. ಹಣದ ನಿರ್ವಹಣೆಯನ್ನು ಬಹಳ ಜಾಣ್ಮೆಯಿಂದ ಮಾಡುವಿರಿ. ಒಡಹುಟ್ಟಿದವರಿಗಾಗಿ ಸಾಕಷ್ಟು ಸಹಾಯ ಮಾಡುವಿರಿ. ಹೊಸ ಆಸ್ತಿ ಖರೀದಿಗೆ ಮುಂದಾಗುವುದು ಬೇಡ. ಉನ್ನತ ವಿದ್ಯೆಯನ್ನು ಓದುತ್ತಿರುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ತಂದೆಯಿಂದ ಅವರ ವ್ಯವಹಾರಗಳ ಒಳಗುಟ್ಟುಗಳನ್ನು ತಿಳಿಯಬಹುದು. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ಗಣಿ ಉದ್ಯಮ ಮಾಡುವವರಿಗೆ ಅವರ ವ್ಯವಹಾರದಲ್ಲಿ ಬಹಳ ಮುನ್ನಡೆ ಇರುತ್ತದೆ. ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಕೆಲಸ ಮತ್ತು ಆದಾಯ ಬರುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಿಗಾಗಿ ದೇಣಿಗೆ ಕೊಡುವಿರಿ.

ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸ್ವಂತ ಉದ್ಯೋಗ ಮಾಡುವವರಿಗೆ ಬಿಡುವಿಲ್ಲದ ಕೆಲಸ ದೊರೆತು ಕೆಲಸಗಳನ್ನು ಪೂರ್ತಿ ಮಾಡಬೇಕಾದ ಅನಿವಾರ್ಯವಿರುತ್ತದೆ. ಆದಾಯವೂ ಹೆಚ್ಚು ಇರುತ್ತದೆ. ಭಾಷಣಕಾರರಿಗೆ ಮತ್ತು ಉಪನ್ಯಾಸಕರಿಗೆ ಉತ್ತಮ ವೇದಿಕೆಗಳು ದೊರೆತು ಅವರ ವಿಷಯಗಳನ್ನು ಸಂಪೂರ್ಣವಾಗಿ ಮಂಡಿಸಲು ಅವಕಾಶ ದೊರೆತು ಸಂತಸವಾಗುತ್ತದೆ. ಮಾಡಿದ್ದ ಸಾಲಗಳನ್ನು ತೀರಿಸಿ ನೆಮ್ಮದಿಯನ್ನು ಕಾಣುವಿರಿ. ಕರಿದ ತಿಂಡಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಉತ್ತಮ ವ್ಯಾಪಾರದ ಜೊತೆಗೆ ಸಾಕಷ್ಟು ಲಾಭವಿರುತ್ತದೆ. ಉದ್ಯೋಗದಲ್ಲಿರುವವರು ವಿವೇಕ ರಹಿತವಾಗಿ ವರ್ತಿಸಿದಲ್ಲಿ ಉದ್ಯೋಗ ಕಳೆದುಕೊಳ್ಳುವ ಸಂದರ್ಭ ಬರಬಹುದು. ವ್ಯವಹಾರಗಳ ಮೇಲೆ ನಿಮ್ಮ ಹಿಡಿತ ಗಟ್ಟಿಗೊಳ್ಳುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ.

ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ವಿವಾದಾಸ್ಪದ ವಿಷಯಗಳಲ್ಲಿ ತಲೆ ಹಾಕದಿರುವುದು ಬಹಳ ಉತ್ತಮ. ಶಸ್ತ್ರಚಿಕಿತ್ಸೆಯನ್ನು ಮಾಡುವ ವೈದ್ಯರಿಗೆ ಸಂಪಾದನೆ ಮಾಡುವ ಯೋಗವಿದೆ. ವಾಹನ ರಿಪೇರಿ ಮಾಡುವವರಿಗೆ ಬಿಡುವಿಲ್ಲದ ಕೆಲಸವಿದ್ದು ಆದಾಯ ಹೆಚ್ಚುತ್ತದೆ. ವಾಹನ ಮಾರಾಟಗಾರರಿಗೆ ಅಭಿವೃದ್ಧಿಯ ಯೋಗವಿದೆ. ಕೃಷಿ ವಿಸ್ತರಣೆಯ ಬಗ್ಗೆ ಸಾಕಷ್ಟು ಗಮನ ಕೊಡುವಿರಿ. ನೂತನ ಮಾದರಿಯ ಕೃಷಿ ಮಾಡುವ ಬಗ್ಗೆ ತಿಳಿವಳಿಕೆ ಪಡೆಯುವಿರಿ. ಸಂಗಾತಿಗೆ ಸ್ಥಿರಾಸ್ತಿ ಒದಗುವ ಯೋಗವಿದೆ. ನೀವು ನಡೆಸುವ ವ್ಯವಹಾರಗಳಲ್ಲಿ ಗೊಂದಲಗಳಾಗಬಹುದು. ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಒಲವು ತೋರುವಿರಿ. ತಮ್ಮ ವಂಚನೆಯ ಬಗ್ಗೆ ರಾಜಕೀಯ ವ್ಯಕ್ತಿಗಳು ಯೋಚಿಸಬೇಕಾದ ಸ್ಥಿತಿ ಬರಬಹುದು. ಬೆಲೆಬಾಳುವ ವಸ್ತುಗಳು ಕಳೆದು ಹೋಗುವ ಸಂದರ್ಭವಿದೆ, ಹೆಚ್ಚು ಎಚ್ಚರವಹಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT