ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 1-8-2021ರಿಂದ 7-8-2021ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

****

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)
ಇತರರ ನೆರವಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಸಹಾಯ ಮಾಡಿದಲ್ಲಿ ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವ ಮೂಡುತ್ತದೆ. ಆರ್ಥಿಕ ಪರಿಸ್ಥಿತಿಯು ಚೇತರಿಕೆ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಮುಂದಾಲೋಚನೆ ಮಾಡಿ ಕೈಗೊಂಡ ಕೆಲಸಗಳಲ್ಲಿ ಯಶಸ್ಸನ್ನು ಕಾಣುವಿರಿ. ಬಹಳ ಅಡೆತಡೆಗಳಿಂದ ನಿಂತಿದ್ದ ಕೆಲವು ಕೆಲಸಗಳು ಈಗ ನಿಧಾನವಾಗಿ ಮುಂದುವರೆಯುತ್ತವೆ. ಅನಿರೀಕ್ಷಿತ ವೆಚ್ಚಗಳು ನಿಮ್ಮ ಮೈಮೇಲೆ ಬರಬಹುದು. ಸಂಶೋಧಕರು ಅವರ ಅಧ್ಯಯನಕ್ಕೆ ಬೇಕಾದ ಪೂರಕ ವಿಷಯಗಳ ಬಗ್ಗೆ ಗಮನಹರಿಸುವರು. ವಿದೇಶಿ ವ್ಯವಹಾರ ಮಾಡುವವರ ಆದಾಯದಲ್ಲಿ ಏರಿಕೆಯಾಗುತ್ತದೆ. ಹಣಕಾಸಿನ ಸಂಸ್ಥೆಗಳಿಗೆ ಬರಬೇಕಾಗಿದ್ದ ಬಾಕಿ ಹಣ ಬರುತ್ತದೆ.

**

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಸಂಸಾರದ ಹೊಂದಾಣಿಕೆಯಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಹೊಸ ರೀತಿಯ ಆದಾಯದ ಮೂಲವನ್ನು ಹುಡುಕುವಿರಿ. ಕಳೆದುಹೋಗಿದ್ದ ಕೆಲವು ವಸ್ತುಗಳು ಪುನಃ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಗಾಗಿ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಇರುತ್ತದೆ. ಯಾಂತ್ರಿಕ ವಿಷಯ ಪರಿಣಿತರಿಗೆ ಉತ್ತಮ ಆದಾಯ ಬರುತ್ತದೆ. ಹಲ್ಲುನೋವು ಕಾಣಿಸಬಹುದು. ಆಸ್ತಿಯ ಬೆಲೆಯ ಬಗ್ಗೆ ವಾಗ್ವಾದ ಆರಂಭವಾಗಬಹುದು. ಅಧ್ಯಾಪಕರುಗಳಿಗೆ ಬರಬೇಕಾಗಿದ್ದ ಬಾಕಿ ಹಣ ಬರುತ್ತವೆ. ತಂದೆಯಿಂದ ಕೃಷಿಭೂಮಿ ಬಳುವಳಿಯಾಗಿ ಸಿಗಬಹುದು. ಪುಸ್ತಕ ವ್ಯಾಪಾರಿಗಳು ವ್ಯಾಪಾರದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ನ್ಯಾಯವಾದಿಗಳಿಗೆ ಹೆಚ್ಚಿನ ಅವಕಾಶ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ವ್ಯವಹಾರದಲ್ಲಿ ಒಂದು ಪ್ರಮುಖವಾದ ಸಮಸ್ಯೆಯನ್ನು ಅತ್ಯಂತ ನಾಜೂಕಾಗಿ ಪರಿಹರಿಸುವಿರಿ. ರಾಜಕೀಯ ವ್ಯಕ್ತಿಗಳು ಹೆಚ್ಚು ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡದಿರುವುದು ಒಳ್ಳೆಯದು. ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿರಿ. ದ್ರವ ಪದಾರ್ಥಗಳ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ಧನಸಹಾಯ ದೊರೆತು ಹೆಚ್ಚು ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಕೆಲವರು ಬಡಬಗ್ಗರಿಗೆ ದಾನಮಾಡಿ ಹೆಚ್ಚು ಸಂತೋಷವನ್ನು ಕಾಣುವರು. ಉದರ ಬೇನೆ ಸ್ವಲ್ಪ ಕಾಣಿಸಬಹುದು. ತಂದೆಯ ಹಿತೋಕ್ತಿಗಳು ನಿಮಗೆ ಒಳಿತನ್ನು ತರುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ವೃತ್ತಿಯಲ್ಲಿ ನಿಮ್ಮ ಸ್ಥಾನ ಗುರುತಿಸಲ್ಪಡುತ್ತದೆ.

**
ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)
ಉನ್ನತಮಟ್ಟದ ನಿರ್ಧಾರಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ನಿಮ್ಮ ನಿರ್ಣಯ ಫಲಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಾಲ ಕೊಡುವ ವಿಚಾರವನ್ನು ಕೈಬಿಡಿರಿ. ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗದಲ್ಲಿ ಪ್ರಶಂಸೆ ಸಿಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ವಸ್ತ್ರ ವ್ಯಾಪಾರಿಗಳಲ್ಲಿ ಉಳಿದಿದ್ದ ಮಾಲುಗಳು ಈಗ ಬಿಕರಿಯಾಗುತ್ತವೆ. ಆಧ್ಯಾತ್ಮಿಕ ಜೀವನವನ್ನು ಅನುಸರಿಸುತ್ತಿರುವವರಿಗೆ ಹೆಚ್ಚಿನ ನೆಮ್ಮದಿ ಬರುತ್ತದೆ. ಪತ್ರಿಕಾರಂಗದವರಿಗೆ ಕೆಲವೊಂದು ವಿಚಾರಗಳಿಗೆ ಹೆಚ್ಚು ಪ್ರಶಂಸೆ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

**
ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕೃಷಿ ಕ್ಷೇತ್ರದಲ್ಲಿರುವವರು ಉಪಕರಣಗಳನ್ನು ಬಳಸುವಾಗ ಕಾಲುಗಳಿಗೆ ಪೆಟ್ಟಾಗುವ ಸಂದರ್ಭವಿದೆ, ಹೀಗಾಗಿ ಎಚ್ಚರವಾಗಿರಿ. ಮಕ್ಕಳ ಆರೋಗ್ಯದ ಬಗ್ಗೆ ಸೂಕ್ತ ಗಮನ ಕೊಡುವುದು ಮುಖ್ಯ. ರಾಜಕೀಯ ರಂಗದವರಿಗೆ ತುರುಸಿನ ಓಡಾಟಗಳು ಇರುತ್ತವೆ. ಸೇವಕ ವರ್ಗದವರಿಂದ ಸ್ವಲ್ಪ ಧನ ನಷ್ಟ ಆಗಬಹುದು. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿ ದೈವ ಕಾರ್ಯಗಳಲ್ಲಿ ತೊಡಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಂಗಾತಿಯು ಅವರ ಮಾತನ್ನು ಈಡೇರಿಸಲು ಒತ್ತಾಯ ಮಾಡಿ ಮುಜುಗರಕ್ಕೆ ಸಿಲುಕಿಸುವರು. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆ ಇದೆ.

**
ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಕುಟುಂಬದಲ್ಲಿನ ಕೆಲವು ಸಮಸ್ಯೆಗಳಿಗೆ ಬಂಧುಗಳಿಂದ ಪರಿಹಾರ ದೊರೆಯುತ್ತದೆ. ಸರ್ಕಾರದಿಂದ ಕೆಲವೊಂದು ಸಹಾಯಧನ ಬರುವುದು ತಡವಾಗಬಹುದು. ಮಹಿಳೆಯರ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸೋದರರ ಸಹಾಯದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯನ್ನು ಕಾಣಬಹುದು. ಸಹೋದ್ಯೋಗಿಗಳ ಮಧ್ಯಸ್ಥಿಕೆಯಿಂದ ವೃತ್ತಿಯಲ್ಲಿನ ಗೋಜಲುಗಳು ಪರಿಹಾರವಾಗುತ್ತವೆ. ಬಟ್ಟೆಗಳ ಮೇಲೆ ಕುಸರಿಕಲೆಯನ್ನು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂತಸದ ಕಾರ್ಯಗಳಲ್ಲಿ ಭಾಗವಹಿಸಲು ಬಂಧುಗಳಿಂದ ಕರೆ ಬರುತ್ತದೆ.

**
ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಉದ್ಯೋಗ ಬದಲಾವಣೆಯಾಗಿ ಮೇಲಾದಾಯ ದೊರೆಯುವ ಜಾಗ ಸಿಗುವ ಅವಕಾಶವಿದೆ. ಗೃಹ ನಿರ್ಮಾಣ ಕಾರ್ಯಗಳನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಉನ್ನತ ಅಧ್ಯಯನವನ್ನು ಮಾಡಬೇಕೆನ್ನುವವರು ಈಗ ಯತ್ನಿಸಬಹುದು. ಸ್ವಂತ ಆರೋಗ್ಯದ ಬಗ್ಗೆ ಗಮನಹರಿಸುವುದು ಅಗತ್ಯ. ಗಣ್ಯ ವ್ಯಕ್ತಿಗಳ ಸಹಕಾರದಿಂದ ಕೆಲವೊಂದು ಕೆಲಸಗಳು ಆಗುತ್ತವೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಮಗೆ ಸ್ವಲ್ಪ ಲಾಭಬರುತ್ತದೆ. ಸಂಗಾತಿಯ ಕಡೆಯ ಹಿತಶತ್ರುಗಳ ಬಗ್ಗೆ ಎಚ್ಚರವಹಿಸಿರಿ. ಅತಿಯಾದ ಮಾತಿನಿಂದ ನೆರೆಹೊರೆಯವರೊಡನೆ ಕಲಹ ಏರ್ಪಡಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಹೂಡಿಕೆ ಮಾಡುವ ವಿಷಯಗಳಲ್ಲಿ ಬಹಳ ಎಚ್ಚರವಿರಲಿ. ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಇರುತ್ತದೆ. ಕೆಲವೊಂದು ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳುವ ವಿಷಯದ ಮಾತುಕತೆಯಲ್ಲಿ ಪ್ರಗತಿಯನ್ನು ಕಾಣಬಹುದು. ಕೆಲವರ ಆರೋಗ್ಯ ಸ್ವಲ್ಪ ವ್ಯತ್ಯಾಸವಾಗಿ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗಬಹುದು. ದಾಯಾದಿಗಳೊಂದಿಗೆ ಇದ್ದ ಆಸ್ತಿಯ ವ್ಯವಹಾರಗಳು ಇತ್ಯರ್ಥಕ್ಕೆ ಬರುತ್ತವೆ. ಸಣ್ಣಸಣ್ಣ ವಿಚಾರಗಳಿಗೆ ತಲೆಕೆಡಿಸಿಕೊಂಡು ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಡಿ. ವಿದ್ಯುತ್ ಉಪಕರಣಗಳ ವ್ಯಾಪಾರಸ್ಥರು ವ್ಯಾಪಾರದಲ್ಲಿ ಏರಿಳಿತವನ್ನು ಕಾಣಬಹುದು. ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶಗಳಿವೆ.

**
ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ಅದೃಷ್ಟ ನಿಮ್ಮ ಪಾಲಿಗಿದದ್ದು ನಿಮ್ಮ ಕೆಲಸಗಳಲ್ಲಿ ಜಯ ದೊರೆಯುತ್ತದೆ. ಕೃಷಿ ಕೆಲಸಗಳು ಸುಗಮವಾಗಿ ಆಗುತ್ತವೆ. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಏರಿಳಿತ ಕಂಡುಬಂದರೂ ನಷ್ಟ ಇರುವುದಿಲ್ಲ. ಕೆಲವೊಂದು ಋಣ ಪರಿಹಾರದಿಂದ ನಿರಾಳತೆಯನ್ನು ಕಾಣುವಿರಿ. ಮಾತನಾಡುವಾಗ ಒರಟುತನ ಸಲ್ಲದು. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ಹಣದ ವಿಷಯದಲ್ಲಿ ಎದ್ದಿದ್ದ ಅನುಮಾನಗಳು ಪರಿಹಾರವಾಗುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಕೃಷಿಕರ ಬೆಳೆಗಳಿಗೆ ನಿರೀಕ್ಷಿತ ಬೆಲೆ ದೊರೆತು ಸಂತಸವಾಗುತ್ತದೆ.

**
ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಸಹೋದ್ಯೋಗಿಗಳಿಂದ ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಬಳಸಿರಿ. ಸಹೋದ್ಯೋಗಿಗಳು ಹೇಳುವ ಚಾಡಿಮಾತುಗಳನ್ನು ಅಳೆದು ತೂಗಿ ನೋಡಿ ಅನುಸರಿಸಿರಿ. ಗೃಹಿಣಿಯರು ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಲು ಬೇಗ ಮುಂದಾಗುವರು. ಆರ್ಥಿಕ ಸಮಸ್ಯೆ ಪರಿಹಾರವಾಗಿ ಋಣಮುಕ್ತರಾಗುವ ಲಕ್ಷಣಗಳಿವೆ. ವಿವಾಹ ಆಕಾಂಕ್ಷಿಗಳಿಗೆ ವಿವಾಹ ಸಂಬಂಧಗಳು ಕೂಡಿ ಬರಬಹುದು. ನೀವು ದೃಢನಿರ್ಧಾರ ಇಟ್ಟು ಮಾಡಿದ ಕೆಲಸಗಳಲ್ಲಿ ಜಯವಿರುತ್ತದೆ. ಹಣದ ಹರಿವು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಇರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚುತ್ತದೆ.

**
ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹೊಸ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಅನುಭವಿಗಳ ಮಾತುಗಳನ್ನು ಕೇಳುವುದು ಉತ್ತಮ. ಯುವಕರು ತಾಳ್ಮೆ ಕೆಟ್ಟು ಮಿತಿಮೀರಿ ಮಾತನಾಡುವುದು ಬೇಡ. ನ್ಯಾಯಾಲಯದ ಕಟ್ಟಳೆಗಳಲ್ಲಿ ಯಶಸ್ಸಿನ ಹಾದಿ ಇರುತ್ತದೆ. ಮಹಿಳೆಯರು ಕೆಲದಿನಗಳ ಮಟ್ಟಿಗೆ ರಾಜಕೀಯ ವಿಷಯಗಳಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುವುದು ಬೇಡ. ರೈತಾಪಿ ವರ್ಗದವರು ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಬಂಧುಗಳೊಡನೆ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ. ಆರ್ಥಿಕ ಕ್ರೋಡೀಕರಣಕ್ಕಾಗಿ ಹೊಸ ಸಂಪನ್ಮೂಲಗಳ ಬಗ್ಗೆ ಹೊಸ ಚಿಂತನೆಯನ್ನು ಮಾಡುವಿರಿ. ಬೆಂಕಿಯೊಡನೆ ಕೆಲಸ ಮಾಡುವವರು ಕಣ್ಣಿನ ಬಗ್ಗೆ ಎಚ್ಚರವಹಿಸಿರಿ. ಕೆಲವು ಮಹಿಳೆಯರಿಗೆ ತವರಿನಿಂದ ಆಸ್ತಿ ದೊರೆಯುವ ಸಾಧ್ಯತೆಯಿದೆ.

**
ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಬಹಳ ಉತ್ತಮ. ಗೃಹೋದ್ಯಮವನ್ನು ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ವಿಸ್ತರಣೆಯನ್ನು ಕಾಣಬಹುದು. ನೂತನ ಗೃಹದ ಒಳಾಂಗಣ ಅಲಂಕಾರಗಳ ಬಗ್ಗೆ ಚಿಂತನೆ ಮಾಡುವಿರಿ. ಅಗತ್ಯಕ್ಕಿಂತ ಹೆಚ್ಚು ಹಿರಿಯರ ಓಲೈಕೆಯನ್ನು ಮಾಡಿ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಖರೀದಿಸುವ ವಿಷಯದಲ್ಲಿ ಹೆಚ್ಚು ಮುತುವರ್ಜಿ ತೋರುವಿರಿ. ಸರ್ಕಾರಿ ಕೆಲಸಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣಬಹುದು. ಮುಖ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸುವಾಗ ಎಚ್ಚರವಿರಲಿ ಅವುಗಳಿಂದ ಚರ್ಮ ಕಾಯಿಲೆ ಬರಬಹುದು. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇದ್ದು ವ್ಯವಹಾರ ಮುನ್ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT