ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ದುರ್ಗುಣ, ವಿಷಯವಾಸನೆ, ಮದ–ಮತ್ಸರ ಅಳಿಯದಿದ್ದರೆ ಪೂಜೆ ವ್ಯರ್ಥ

Last Updated 5 ಮೇ 2021, 3:44 IST
ಅಕ್ಷರ ಗಾತ್ರ

ದುರ್ಗುಣ ಅಳಿಯದೇ ನವವಿಧ ಭಕ್ತಿಯ ಮಾಡಿದಡೇನು?

ವಿಜಯವಾಸನೆ ಪರಿಪರಿ ಕಳೆಯದೆ ಪುಷ್ಪವನರ್ಪಿಸದಡೇನು?

ಅಹಂಕಾರವ ನೀಗದೆ ಶಾಸ್ತ್ರ ಪುರಾಣವ ನೋಡೊದಡೇನು?

ಕಾಮಾದಿಗಳ ಜಯಿಸದೇ ಧೂಪ ದೀಪ ನೈವೇದ್ಯಗೈದಡೇನು?

ಆಡಂಬರದ ಡೊಂಬರಾಟಕ್ಕೆ ಒಲಿಯನು ಒಲಿಯನಯ್ಯ

ನಮ್ಮ ಬಸವಪ್ರಭು ಮುರುಗೇಶ.

ಈ ವಚನವನ್ನು ನಮ್ಮ ಗುರುಗಳಾದ ಶಿವಮೂರ್ತಿ ಮುರುಘಾ ಶರಣರು ರಚಿಸಿದ್ದಾರೆ. ಪ್ರತಿನಿತ್ಯ ನಾವು ನಂಬಿರುವ ದೇವರನ್ನು ಭಕ್ತಿಯಿಂದ ಪೂಜಿಸುತ್ತೇವೆ. ಭಕ್ತಿ ಎಂದರೆ ನಿರ್ಮಲವಾದ ಮನಸ್ಸಿನಿಂದ ದೇವರನ್ನು ಪ್ರೀತಿಸುವುದು. ಈ ಭಕ್ತಿಯಲ್ಲಿ ನವವಿಧಗಳಿವೆ. 1. ಶ್ರವಣಭಕ್ತಿ– ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು. 2. ಕೀರ್ತನ ಭಕ್ತಿ– ದೇವರ ಕೀರ್ತನೆ, ಭಜನೆ, ಗುಣಗಾನ ಮಾಡಿ ಹಾಡಿ ಕೊಂಡಾಡುವುದು. 3. ಸ್ಮರಣೆ ಭಕ್ತಿ– ದೇವರ ನಾಮಸ್ಮರಣೆಯನ್ನು ನಿರಂತರ ಮಾಡುವುದು. 4. ಪಾದಸೇವೆ ಭಕ್ತಿ– ಮಾಡುವ ಕಾರ್ಯಗಳನ್ನು ದೇವರ ಪಾದಸೇವೆಯೆಂದು ತಿಳಿದು ಮಾಡುವುದು. 5. ಅರ್ಚನೆ ಭಕ್ತಿ– ಫಲ, ಪುಷ್ಪಗಳಿಂದ ದೇವರ ಅರ್ಚನೆ, ಪೂಜೆ ಮಾಡುವುದು. 6. ವಂದನೆ ಭಕ್ತಿ–ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡುವುದು. 7. ದಾಸಭಕ್ತಿ– ಎಲ್ಲ ಕಾರ್ಯಗಳನ್ನು ಮಾಡುವಾಗ ದೇವರದಾಸನೆಂದು ತಿಳಿದು ಮಾಡುವುದು. 8. ಸಖಭಕ್ತಿ– ದೇವರ ಮೇಲೆ ವಿಶೇಷವಾದ ಪ್ರೀತಿ, ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು. 9. ಆತ್ಮನಿವೇದನೆ ಭಕ್ತಿ– ಮಾಡುವ ಎಲ್ಲಾ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.

ಹೀಗೆ ನಾವು ದೇವರಿಗೆ ನವವಿಧ ಭಕ್ತಿಗಳಿಂದ ಪೂಜೆ ಮಾಡಿದರೂ ನಮ್ಮೊಳಗಿರುವ ದುರ್ಗುಣ, ವಿಷಯವಾಸನೆ, ಮದ–ಮತ್ಸರಗಳು ಅಳಿಯದೇ ಹೋದರೆ ಆ ಪೂಜೆ ವ್ಯರ್ಥವೆಂದು ಗುರುಗಳು ಹೇಳಿದ್ದಾರೆ. ವ್ಯಕ್ತಿ ತಾನು ಪೂಜೆ ಮಾಡುತ್ತಾ ಮಾಡುತ್ತಾ ಪೂಜ್ಯನಾಗಬೇಕು. ಅದಕ್ಕೆ ಬಸವಣ್ಣನವರು ಇಷ್ಟಲಿಂಗ ಕೊಟ್ಟಿದ್ದಾರೆ. ಆ ಇಷ್ಟಲಿಂಗವನ್ನು ಪೂಜಿಸಿ ಮಾತನಾಡುವ ಲಿಂಗವಾಗೋಣ. ನಡೆದಾಡುವ ದೇವಾಲಯವಾಗೋಣ.

–ಬಸವಪ್ರಭು ಸ್ವಾಮೀಜಿ, ವಿರಕ್ತಮಠ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT