ಈ ವಚನವನ್ನು ನಮ್ಮ ಗುರುಗಳಾದ ಶಿವಮೂರ್ತಿ ಮುರುಘಾ ಶರಣರು ರಚಿಸಿದ್ದಾರೆ. ಪ್ರತಿನಿತ್ಯ ನಾವು ನಂಬಿರುವ ದೇವರನ್ನು ಭಕ್ತಿಯಿಂದ ಪೂಜಿಸುತ್ತೇವೆ. ಭಕ್ತಿ ಎಂದರೆ ನಿರ್ಮಲವಾದ ಮನಸ್ಸಿನಿಂದ ದೇವರನ್ನು ಪ್ರೀತಿಸುವುದು. ಈ ಭಕ್ತಿಯಲ್ಲಿ ನವವಿಧಗಳಿವೆ. 1. ಶ್ರವಣಭಕ್ತಿ– ದೇವರ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು. 2. ಕೀರ್ತನ ಭಕ್ತಿ– ದೇವರ ಕೀರ್ತನೆ, ಭಜನೆ, ಗುಣಗಾನ ಮಾಡಿ ಹಾಡಿ ಕೊಂಡಾಡುವುದು. 3. ಸ್ಮರಣೆ ಭಕ್ತಿ– ದೇವರ ನಾಮಸ್ಮರಣೆಯನ್ನು ನಿರಂತರ ಮಾಡುವುದು. 4. ಪಾದಸೇವೆ ಭಕ್ತಿ– ಮಾಡುವ ಕಾರ್ಯಗಳನ್ನು ದೇವರ ಪಾದಸೇವೆಯೆಂದು ತಿಳಿದು ಮಾಡುವುದು. 5. ಅರ್ಚನೆ ಭಕ್ತಿ– ಫಲ, ಪುಷ್ಪಗಳಿಂದ ದೇವರ ಅರ್ಚನೆ, ಪೂಜೆ ಮಾಡುವುದು. 6. ವಂದನೆ ಭಕ್ತಿ–ದೇವರಿಗೆ ಭಕ್ತಿಯಿಂದ ನಮಸ್ಕಾರ ಮಾಡುವುದು. 7. ದಾಸಭಕ್ತಿ– ಎಲ್ಲ ಕಾರ್ಯಗಳನ್ನು ಮಾಡುವಾಗ ದೇವರದಾಸನೆಂದು ತಿಳಿದು ಮಾಡುವುದು. 8. ಸಖಭಕ್ತಿ– ದೇವರ ಮೇಲೆ ವಿಶೇಷವಾದ ಪ್ರೀತಿ, ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು. 9. ಆತ್ಮನಿವೇದನೆ ಭಕ್ತಿ– ಮಾಡುವ ಎಲ್ಲಾ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದು.