ಗೌರಿಬಿದನೂರು: ತಾಲ್ಲೂಕಿನ ಹೊಸೂರು ಹೋಬಳಿಯ ಕುರೂಡಿ ಕ್ರಾಸ್ ಬಳಿ ಸೋಮವಾರ ರಾತ್ರಿ ವೃತ್ತ ನಿರೀಕ್ಷಕ ವೈ.ಅಮರನಾರಾಯಣ ಹಾಗೂ ಗ್ರಾಮಾಂತರ ಪಿಎಸ್ಐ ಅವಿನಾಶ್ ರೌಡಿ ಶೀಟರ್ಗಳನ್ನು ಬಂಧಿಸಿದ್ದಾರೆ.
ರೌಡಿ ಶೀಟರ್ ಗಳಾದ ಬೊಮ್ಮಶೆಟ್ಟಹಳ್ಳಿಯ ಅರುಣ್ ಕುಮಾರ್ (25) ಅಲಿಯಾಸ್ ಲಾಂಗ್ ಅರುಣ್ ಹಾಗೂ ರಮಾಪುರ ನಿವಾಸಿ ಸುರೇಶ್ (24) ಕೋಟಾಲದಿನ್ನೆ ಬಳಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ನಾಲ್ಕೈದು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಕಳೆದ ಒಂದೆರಡು ದಿನಗಳಿಂದ ಹೊಸೂರು ಹೊರವಲಯದ ಕುರೂಡಿ ಅರಣ್ಯ ವಲಯದಲ್ಲಿ ಕಾಣಿಸಿಕೊಂಡಿದ್ದರು ಎಂಬ ಮಾಹಿತಿಯ ಮೇರೆಗೆ ಸೋಮವಾರ ರಾತ್ರಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು.
ಪಿಎಸ್ಐ ಅವಿನಾಶ್ ಆರೋಪಿ ಅರುಣ್ ಕುಮಾರ್ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಅರುಣ್ ಕುಮಾರ್ ಹಾಗೂ ಆತನ ಸ್ನೇಹಿತ ಸುರೇಶ್ ಮತ್ತು ಮಾರುತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರುಣ್ ಕುಮಾರ್ಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಯಿತು.
ಕಾರ್ಯಾಚರಣೆ ವೇಳೆ ಕಾನ್ಸ್ಟೆಬಲ್ಗಳಾದ ಅರುಣ್ ಮತ್ತು ಮಂಜುನಾಥ್ ಕೈಗೆ ಗಾಯಗಳಾಗಿವೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುರೇಶ್ ಮತ್ತು ಮಾರುತಿ ಪೊಲೀಸರ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.