ಬಾಗಲಕೋಟೆ: 'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಳ್ಳಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುವೆ' ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
'ಸಿಎಂ ನನ್ನ ಮೇಲಿನ ಪ್ರೀತಿಯಿಂದ ನಿಗಮದ ಜವಾಬ್ದಾರಿ ವಹಿಸಿದ್ದಾರೆ. ಆದರೆ ನ್ಯಾಯವಾಗಿ ಅದು ನೇಕಾರ ಸಮುದಾಯದವರಿಗೆ ಸಿಗಬೇಕು. ಅವರಿಗೆ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು. ಅದನ್ನು ಅವರಿಗೆ ಮನವರಿಕೆ ಮಾಡುವೆ‘ ಎಂದು ಸೋಮವಾರ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
’ನಾನು ಯಾವುದೇ ಸ್ಥಾನಮಾನಕ್ಕೂ ಬೇಡಿಕೆ ಇಟ್ಟಿಲ್ಲ. ಹೀಗಾಗಿ ನೇಕಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಮ್ಮ ತಾಲ್ಲೂಕಿನ ನೇಕಾರರ ಮುಖಂಡರು ಇಲ್ಲವೇ ರಾಜ್ಯದ ಯಾವುದೇ ಭಾಗದ ನೇಕಾರರ ಸಮುದಾಯದವರಿಗೆ ಕೊಟ್ಟರೂ ನನ್ನ ತಕರಾರು ಇಲ್ಲ‘ ಎಂದು ಸ್ಪಷ್ಟಪಡಿಸಿದರು.