ಬಾಗಲಕೋಟೆ: ‘ತಿಂಡಿ ಚೆನ್ನಾಗಿದೆ ಕಾಣಯ್ಯ, ನಿತ್ಯ ಇದೇ ಗುಣಮಟ್ಟ ಕಾಯ್ದುಕೊಳ್ಳಿ, ಸ್ವಚ್ಛತೆಯತ್ತ ಗಮನ ಕೊಡಿ, ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ’ ಇದು ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ ಕಿವಿಮಾತು..
ಬಾಗಲಕೋಟೆ ಹಾಗೂ ನವನಗರದ ಬಸ್ ನಿಲ್ದಾಣಗಳಲ್ಲಿ ಶನಿವಾರ ನೂತನ ಇಂದಿರಾ ಕ್ಯಾಂಟೀನ್ಗಳಿಗೆ ಚಾಲನೆ ನೀಡಿದ ಸಿದ್ದರಾಮಯ್ಯ, ಎರಡೂ ಕಡೆ ಶಿರಾ–ಉಪ್ಪಿಟ್ಟು ಸವಿದು ರುಚಿ ನೋಡಿದರು. ಕ್ಯಾಂಟೀನ್ನಲ್ಲಿ ಏನೇನು ಕೊಡುತ್ತೀರಿ, ಎಷ್ಟು ಬೆಲೆ ನಿಗದಿ ಮಾಡಿದ್ದೀರಿ ಎಂದು ಕೇಳಿತಿಳಿದುಕೊಂಡರು.
ಗುಳೇದಗುಡ್ಡದಿಂದ ನೇರವಾಗಿ ಬಾಗಲಕೋಟೆಯ ಹಳೆ ಬಸ್ ನಿಲ್ದಾಣಕ್ಕೆ ಬಂದ ಸಿದ್ದರಾಮಯ್ಯ, ಕ್ಯಾಂಟೀನ್ಗೆ ಚಾಲನೆ ನೀಡಿದರು.ಈ ವೇಳೆ ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಜೊತೆಗಿದ್ದರು.