ಬಾಗಲಕೋಟೆ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತ ಶುಕ್ರವಾರ ಸಕಾರಾತ್ಮಕ ಸಂಗತಿಗೆ ಸಾಕ್ಷಿಯಾಗಿದೆ. ಜಿಲ್ಲೆ ಈಗ ಎಲ್ಲಾ 13 ಕಂಟೈನ್ಮೆಂಟ್ ವಲಯಗಳಿಂದಲೂ ಮುಕ್ತಿ ಕಂಡಿದೆ.
ಜಿಲ್ಲೆಯ ಮೊದಲ ಕೋವಿಡ್–19 ಸೋಂಕು ಪತ್ತೆಯಾದ ಬಾಗಲಕೋಟೆ ನಗರದಲ್ಲಿ ಎರಡು, ಮುಧೋಳ ನಗರದಲ್ಲಿ ಐದು, ಮುಗಳಖೋಡದಲ್ಲಿ ಒಂದು, ಜಮಖಂಡಿ ನಗರದಲ್ಲಿ ಮೂರು, ಬಾದಾಮಿ ನಗರದಲ್ಲಿ ಒಂದು, ಢಾಣಕಶಿರೂರ ಗ್ರಾಮದಲ್ಲಿ ಒಂದು ಸೇರಿ ಒಟ್ಟು 13 ಕಂಟೈನ್ಮೆಂಟ್ ಝೋನ್ಗಳನ್ನು ಜಿಲ್ಲಾಡಳಿತ ಗುರುತಿಸಿತ್ತು.
ಈ ಪೈಕಿ 12 ಝೋನ್ಗಳು ಈಗಾಗಲೇ ತೆರವುಗೊಂಡಿದ್ದವು. ಮುಧೋಳ ನಗರದ ವಡ್ಡರ ಗಲ್ಲಿ ಮಾತ್ರ ಬಾಕಿ ಉಳಿದಿತ್ತು.
ಶುಕ್ರವಾರ ಅದನ್ನು ಸಹ ತೆರವುಗೊಳಿಸುವ ಮೂಲಕ ಬಾಗಲಕೋಟೆ ಜಿಲ್ಲೆ ಕಂಟೈನ್ಮೆಂಟ್ ಝೋನ್ನಿಂದ ಮುಕ್ತವಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗ ಹೊಸದಾಗಿ ಬಾದಾಮಿ ಪಟ್ಟಣ, ಬೀಳಗಿ, ಹುನಗುಂದ ತಾಲ್ಲೂಕಿನ ಗುಡೂರು ಹಾಗೂ ಇಳಕಲ್ನಲ್ಲಿ ಕೋವಿಡ್–19 ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ ಅವೆಲ್ಲರೂ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವವರಲ್ಲಿ ದೃಢಪಟ್ಟಿವೆ. ಎಲ್ಲರೂ ಮಹಾರಾಷ್ಟ್ರದಿಂದ ಮರಳಿದವರೇ ಆಗಿದ್ದಾರೆ. ಹೀಗಾಗಿ ಹೊಸ ಕಂಟೈನ್ಮೆಂಟ್ ಝೋನ್ಗಳ ಘೋಷಣೆಯ ಅಗತ್ಯತೆ ಕಂಡುಬಂದಿಲ್ಲ.