ಬಾಗಲಕೋಟೆ: ಮನೆ ರಹಿತ ಬಡವರು ಹಾಗೂ ದಲಿತ ವರ್ಗದವರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರತೀರ್ಥ ಪರಿಷ್ಕರಿಸಿದ ಪಠ್ಯಪುಸ್ತಕರ ರದ್ದುಗೊಳಿಸಿ, ಹಳೆಯ ಪಠ್ಯಪುಸ್ತಕಗಳನ್ನೇ ಒದಗಿಸಬೇಕು. ಪರಿಶಿಷ್ಟ ಜಾತಿ, ಪಂಗಡ ವರ್ಗಗಳಿಗೆ ಕಾಯ್ದಿಸಿರಿಸಿರುವ ಎಸ್ಸಿಎಸ್ಪಿ/ಟಿಎಸ್ಪಿ ಅನುದಾನದ ದುರುಪಯೋಗ ತಡೆಯಬೇಕು. ಕಾಯಿದೆಯಲ್ಲಿರುವ ದಲಿತವಿರೋಧಿ ಸೆಕ್ಷನ್ 7 ಡಿ ರದ್ದಾಗಬೇಕು ಎಂದು ಆಗ್ರಹಿಸಿದರು.
ಮಲೆನಾಡು ಭಾಗದಲ್ಲಿ ಕಾಫಿ ಪ್ಲಾಂಟರ್ಗಳು ಅಕ್ರಮವಾಗಿ ಒತ್ತುವರಿ ಮಾಡಿರುವ ಭೂಮಿ ತೆರವುಗೊಳಿಸಿ, ಭೂ ರಹಿತರಿಗೆ ಹಂಚಬೇಕು. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಬೇಡಜಂಗಮ ಹಾಗೂ ಇತರೆಯವರು ಪಡೆದಿರುವ ಸಾವಿರಾರು ಸುಳ್ಳು ಜಾತಿಪತ್ರಗಳನ್ನು ರದ್ದುಪಡಿಸಬೇಕು. ಪಡೆದವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು. ನ್ಯಾಯಮೂರ್ತಿ ನಾಗಮೋಹನ್ದಾಸ ಅವರು ನೀಡಿರುವ ವರದಿಯಂತೆ ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸುಭಾಷ ಅಡಿ ಶಿಫಾರಸ್ಸನ್ನು ಜಾರಿಗೊಳಿಸಬೇಕು. ತಡೆ ಹಿಡಿದಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಸ್ಸಿ,ಎಸ್ಟಿ ಅವರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಯುವರಾಜ ಬಂಡಿ, ರವಿ ಅಬ್ಬಿಗೇರು, ಶ್ರೀಕಾಂತ ದೊಡ್ಡಮನಿ, ದುರಗಪ್ಪ ನಡವಿನಮನಿ, ಪ್ರಕಾಶ ಎಲ್, ಪರಶುರಾಮ ಮನಗೋಳ, ಕೃಷ್ಣಾ ಚಲವಾದಿ ಇದ್ದರು.