ಶಿರೂರ (ಟಿ.ಎಂ.ಭಗವತಿ ವೇದಿಕೆ): ಡಾ.ಮಲ್ಲಿಕಾ ಘಂಟಿ ಅವರದು ನಿರಂತರ ಹೋರಾಟದ ಬದುಕು ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಹೇಳಿದರು.
ಅವರು ಇಲ್ಲಿ ನಡೆದಿರುವ ಬಾಗಲಕೋಟೆ ಜಿಲ್ಲಾ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ 'ಸರ್ವಾಧ್ಯಕ್ಷರ ಬದುಕು-ಬರಹ' ಕುರಿತ ಗೋಷ್ಠಿಯಲ್ಲಿ ಡಾ.ಮಲ್ಲಿಕಾ ಘಂಟಿ ಅವರ ಬದುಕು-ಬರಹ ಕುರಿತು ಮಾತನಾಡಿ, ಡಾ.ಘಂಟಿ ಅವರು ತುಳಿತಕ್ಕೆ ಒಳಗಾದವರು, ಅಸಹಾಯಕರು, ಶೋಷಿತರು ಹಾಗೂ ಸ್ತ್ರೀಪರವಾಗಿ ನಿಂತು ಹೋರಾಟ ಮಾಡುವ ಕಾಳಜಿಯುಳ್ಳವರು ಎಂದರು.
ಡಾ.ಘಂಟಿ ಅವರ ಸಾಹಿತ್ಯದಲ್ಲಿ ಬದ್ಧತೆ, ವೈಚಾರಿಕತೆ, ಪ್ರಾಮಾಣಿಕತೆ ಇರುವುದನ್ನು ಕಾಣಬಹುದಾಗಿದೆ ಎಂದ ಡಾ.ದಳವಾಯಿ, ಮಲ್ಲಿಕಾ ಘಂಟಿ ಅವರು ಬಹಳಷ್ಟು ಜನ ತಿಳಿದುಕೊಂಡಂತೆ ಪುರುಷ ದ್ವೇಷಿಯೂ ಅಲ್ಲ ಜಾತಿವಾದಿಯೂ ಅಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಎಸ್.ಜಿ.ಕೋಟಿ, ಡಾ.ವಿಶ್ವನಾಥ ವಂಶಾಕೃತಮಠ, ಸಾಹಿತಿ ಜಿ.ಎಂ.ಸಿಂಧೂರ ಮಾತನಾಡಿ, ಡಾ.ಮಲ್ಲಿಕಾ ಘಂಟಿ ಅವರ ಚಿಂತನೆಗಳು, ಆಲೋಚನೆಗಳು ಶ್ರೇಷ್ಠಮಟ್ಟದವುಗಳಾಗಿದ್ದು, ಅವರೊಬ್ಬ ಸಾಧಕರಾಗಿ ಬೆಳೆದಿದ್ದಾರೆ ಎಂದರು.