ಗುಳೇದಗುಡ್ಡ: ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಸಭಾಭವನದಲ್ಲಿ ಬುಧವಾರ ದಿ. ಕಲ್ಯಾಣರಾವ್ ಮರಳಿ ಅವರ ‘ಬಿಜೆಪಿ ನಡೆದು ಬಂದ ದಾರಿ’ ಪುಸ್ತಕ ಬಿಡುಗಡೆ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ‘ಕಲ್ಯಾಣರಾವ್ ಮರಳಿ ಅವರು ಶಾಲೆಗೆ ಮಾತ್ರ ಶಿಕ್ಷಕರಾಗಿರಲಿಲ್ಲ. ಇಡೀ ಸಮಾಜಕ್ಕೆ ಶಿಕ್ಷಕರಾಗಿದ್ದರು. ಈಗೀಗ ಪಕ್ಷಕ್ಕೆ ಬಂದಿರುವವರಿಗೆ ಬಿಜೆಪಿ ಇತಿಹಾಸ ಗೊತ್ತಿಲ್ಲ. ಪಕ್ಷದ ಇತಿಹಾಸ ಗೊತ್ತಿಲ್ಲದವರಿಗೆ ಕಲ್ಯಾಣರಾವ್ ಮರಳಿ ಅವರ ‘ಬಿಜೆಪಿ ನಡೆದು ಬಂದ ದಾರಿ’ ಪುಸ್ತಕ ಮಾರ್ಗದರ್ಶಕವಾಗಿದೆ’ ಎಂದು ಹೇಳಿದರು.
ಜನಸಂಘದ ಸಂಘಟಕ ರೋಹಿತ್ ಚಕ್ರತೀರ್ಥ ಮಾತನಾಡಿ, ‘ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಹಿಂದೂಗಳನ್ನು ಅಮಾನವೀಯವಾಗಿ ಕಂಡಾಗ ಸಿಡಿದೆದ್ದ ಶ್ಯಾಮ್ಪ್ರಸಾದ್ ಮುಖರ್ಜಿ ಅವರು ಜನಸಂಘ ಕಟ್ಟಿದರು. ಜನಸಂಘದಿಂದ ರೂಪುಗೊಂಡ ಬಿಜೆಪಿ ಇಂದು ಜಗತ್ತಿನ ಅತ್ಯಂತ ದೊಡ್ಡ ಪಕ್ಷವಾಗಿದೆ’ ಎಂದು ಹೇಳಿದರು.
‘ಭಾರತ ಅಖಂಡವಾಗಿ ಇರಬೇಕು. ನಮ್ಮ ಶಿಕ್ಷಣದಲ್ಲಿ ರಾಷ್ಟ್ರೀಯತೆ, ಭಾರತೀಯತೆ ಇರಬೇಕು. ಕಲ್ಯಾಣರಾವ್ ಮರಳಿ ಅವರು ಜನಸಂಘದಿಂದ ಬಿಜೆಪಿ ಬೆಳೆದು ಬಂದ ದಾರಿಯನ್ನು ಅತ್ಯಂತ ವಸ್ತುನಿಷ್ಠವಾಗಿ ಬರೆದಿದ್ದಾರೆ. ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಅವರು ನಮ್ಮೊಡನೆ ಇರದಿರುವುದು ಅತ್ಯಂತ ನೋವಿನ ಸಂಗತಿ’ ಎಂದರು.
ಮುರುಘಾಮಠದ ಕಾಶಿನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಆರ್ಎಸ್ಎಸ್ ಕರ್ನಾಟಕ ಉತ್ತರ ಪ್ರಾಂತ ಸದಸ್ಯ ಅರವಿಂದರಾವ್ ದೇಶಪಾಂಡೆ, ಪತ್ರಕರ್ತ ದು.ಗು. ಲಕ್ಷ್ಮಣ ಮಾತನಾಡಿದರು. ಪ್ರಸನ್ನ ಮರಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಟಿ. ಪಾಟೀಲ, ಪ್ರದೀಪ ಮರಳಿ, ಬಾಬಾಸಾಹೇಬ ಕುಲಕರ್ಣಿ ಇದ್ದರು.
ಗುಳೇದಗುಡ್ಡದಲ್ಲಿ ದಿ. ಕಲ್ಯಾಣರಾವ ಮರಳಿ ಅವರ ಬಿಜೆಪಿ ನಡೆದು ಬಂದ ದಾರಿ ಪುಸ್ತಕವನ್ನು ಗಣ್ಯರು ಲೋಕಾರ್ಪಣೆಗೊಳಿಸಲಾಯಿತು.