ಹೋಳಿಹಬ್ಬದ ಇನ್ನೊಂದು ಆಕರ್ಷಣೆಯೆಂದರೆ ಸೋಗಿನ ಬಂಡಿಗಳು. ಐದು ದಿನಗಳ ಕಾಲ ಸೋಗಿನ ಬಂಡಿಗಳ ಮೆರವಣಿಗೆ ನಡೆಯುತ್ತದೆ. ರಾಮಾಯಣ ಮಹಾಭಾರತ ಪುರಾತಣ ಕಾಲದ ಪ್ರಸಿದ್ಧ ಮಹಾಪುರುಷರ ವೇಷಭೂಷಣ ಹಾಕಿ ರಾತ್ರಿ ಜಗಮಗಿಸುವ ಬೆಳಕಿನಲ್ಲಿ ನಡೆಯುವ ಪ್ರದರ್ಶನ ನೋಡುವುದೇ ಖುಷಿ. ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟ ಸೇರಿದಂತೆ ಹಲವು ಘಟನಾವಳಿಗಳ ವೇಷಭೂಷಣಧಾರಿಗಳನ್ನು ಕಾಣಬಹುದಾಗಿದೆ. ದೇಶದ ಸಂಸ್ಕೃತಿ ಇತಿಹಾಸ ಹೋರಾಟವನ್ನು ನೆನಪಿಸುವ ಸೋಗಿನ ಬಂಡಿಯಲ್ಲಿನ ವೇಷಧಾರಿಗಳು ಭವ್ಯ ಪರಂಪರೆಯನ್ನು ಮುಂದುವರೆಸಲು ಪ್ರೇರಣೆ ನೀಡುತ್ತಾರೆ. ಸೋಗಿನ ಬಂಡಿ ವೇಷಭೂಷಣ ಧರಿಸುವ ತಂಡಗಳಿಗೂ ಸ್ಪರ್ಧೆಯನ್ನಿಟ್ಟು ನಗದು ಬಹುಮಾನ ನೀಡಲಾಗುತ್ತದೆ.
ಹಲಗೆ ಮೇಳಗಳ ಸಂಭ್ರಮ
ಬಾಗಲಕೋಟೆಯಲ್ಲಿ ಶಿವರಾತ್ರಿ ಅಮವಾಸ್ಯೆ ಮರು ದಿನದಿಂದಲೇ ಪ್ರತಿ ಓಣಿಯಲ್ಲಿಯೂ ಸಂಜೆಯಾದರೆ ಸಾಕು ವಯಸ್ಸಿನ ಭೇದವಿಲ್ಲದೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹಲಗೆ ವಾದನ ನಡೆಯುತ್ತದೆ. ಒಂದು ತಂಡ ರಚಿಸಿಕೊಂಡು ವಿವಿಧ ವಾದ್ಯಗಳೊಂದಿಗೆ ಹಲಗೆ ಬಾರಿಸುವುದು ಇಲ್ಲಿನ ವಿಶೇಷ. ತಂಡದಲ್ಲಿ ಎಂಟರಿಂದ ಹದಿನೈದು ಜನರಿರುತ್ತಾರೆ. ಒಬ್ಬರು ಹಲಗೆ ಬಾರಿಸಿದರೆ ಉಳಿದವರು ಡಗ್ಗಾ ಝಯಮರಿ ಚಳ್ಳಮ ಗೆಜ್ಜೆ ಲೇಝಿಮ್ ಕಣಿ ಬಾರಿಸುತ್ತಾ ಹೆಜ್ಜೆ ಹಾಕುತ್ತಾರೆ. ಹಲಗೆ ವಾದನದ ಏರಿಳಿತಕ್ಕೆ ತಕ್ಕಂತೆ ಝುಮರಿ ಚಳ್ಳಮ ಬಾರಿಸುತ್ತಾ ಹೆಜ್ಜೆ ಹಾಕುವುದನ್ನು ನೋಡುವುದೇ ಅಂದ. ಇದನ್ನು ಕೇಳುತ್ತಾ ಹೋಗುವವರು ಕೈ ಕಾಲುಗಳು ಅಲ್ಲಿಯೇ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತವೆ. ವಿವಿಧ ಸಂಘ–ಸಂಸ್ಥೆಗಳು ಹಲಗೆ ಮೇಳಗಳನ್ನು ಆಯೋಜಿಸುವ ಮೂಲಕ ಹಲಗೆ ವಾದನದ ಕಲೆಯನ್ನು ಬೆಳೆಸುತ್ತಾ ಬಂದಿವೆ. ₹25 ಸಾವಿರದಿಂದ ₹50 ಸಾವಿರವರೆಗೆ ಬಹುಮಾನ ನೀಡಲಾಗುತ್ತದೆ. ಜಿಲ್ಲೆಯ ವಿವಿಧೆಡೆಯಿಂದ ಹತ್ತಿಪ್ಪತ್ತು ತಂಡಗಳು ಭಾಗವಹಿಸುತ್ತವೆ. ಸಂಜೆ ಆರಂಭವಾದ ಕಾರ್ಯಕ್ರಮವು ಮಧ್ಯರಾತ್ರಿಯವರೆಗೂ ನಡೆಯುತ್ತದೆ. ಅದನ್ನು ನೋಡಿ ಸಂಭ್ರಮಿಸಲು ಸಾವಿರಾರು ಜನರು ಸೇರಿರುತ್ತಾರೆ.