ರಬಕವಿ ಬನಹಟ್ಟಿ: ನೇಕಾರರ ಬಹಳ ದಿನಗಳ ಬೇಡಿಕೆಯಾಗಿದ್ದ ಗುರುತಿನ ಚೀಟಿಗಳನ್ನು ಕೈ ಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ನೀಡಲಾಗುತ್ತಿದೆ. ಇದರಿಂದ ನೇಕಾರರಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶುಕ್ರವಾರ ಶಾಸಕ ಸಿದ್ದು ಸವದಿಯವರ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಪಾವರಲೂಮ್ ನೇಕಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಅವರು ಮಾತನಾಡಿದರು.
‘ಇದುವರೆಗೂ ನೇಕಾರರೆಂದು ಗುರುತಿಸಲು ಯಾವುದೆ ರೀತಿಯ ಸೌಲಭ್ಯಗಳು ಇರಲಿಲ್ಲ. ಗುರುತಿನ ಚೀಟಿಗಳಿಂದ ನೇಕಾರರನ್ನು ಹಾಗೂ ನೇಕಾರಿಕೆಯನ್ನು ಅವಲಂಬಿಸಿದ ಕುಟುಂಬಗಳನ್ನು ಗುರುತಿಸಲು ಸಹಾಯವಾಗುತ್ತದೆ. ಕೈ ಮಗ್ಗ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆಯಡಿ ಐದು ಸಾವಿರ ಹಣ ಜಮೆ ಮಾಡಲಾಗಿದೆ. ಬರುವ ವಿಧಾನ ಸಭೆಯ ಅಧಿವೇಶನದಲ್ಲಿಯೂ ಪಾವರಲೂಮ್ ನೇಕಾರರಿಗೂ ಈ ಸೌಲಭ್ಯವನ್ನು ಒದಗಿಸಲು ಪ್ರುಯತ್ನಿಸುತ್ತೇನೆ’ ಎಂದು ಹೇಳಿದರು.
ಕೈಮಗ್ಗ ಮತ್ತ ಜವಳಿ ಇಲಾಖೆಯ ಉಪ ನಿರ್ದೇಶಕ ಎಂ.ಜಿ.ಕೊಣ್ಣೂರ ಮಾತನಾಡಿ, ‘ಜಿಲ್ಲೆಯದ್ಯಾಂತ 23,958 ಪಾವರಲೂಮ್ ಮಗ್ಗಗಳ ನೇಕಾರರ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ರಬಕವಿ ಬನಹಟ್ಟಿ ಭಾಗದಲ್ಲಿ ಅತಿ ಹೆಚ್ಚು 14,000 ಗುರುತಿನ ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿತರಿಸಲಾಗುವುದು’ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ರಾಮಣ್ಣ ಭದ್ರನವರ, ಸುರೇಶ ಅಕ್ಕಿವಾಟ, ಆನಂದ ಕಂಪು, ಶಿವಾನಂದ ಬುದ್ನಿ, ಶ್ರೀಶೈಲ ಬೀಳಗಿ, ಶಂಕರ ಕುರಂದವಾಡ, ಬಸವರಾಜ ಮೋಪಗಾರ ಸೇರಿದಂತೆ ಅನೇಕರು ಇದ್ದರು.