ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ದಾಳಿ: ಸದ್ದು ಮಾಡಿದ ನೋಟು ಎಣಿಕೆ ಯಂತ್ರ, ಶ್ರೀಗಂಧದ ತುಂಡು

Last Updated 16 ಮಾರ್ಚ್ 2022, 5:51 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಅವರ ನಿವಾಸದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಪರಿಶೀಲನೆ ವೇಳೆ ನೋಟು ಎಣಿಸುವ ಯಂತ್ರ ಹಾಗೂ ಶ್ರೀಗಂಧದ ತುಂಡುಗಳು ದೊರೆತಿರುವುದು ಈಗ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಖೇಡಗಿ ಮೂಲತಃ ವಿಜಯಪುರದ ಜಿಲ್ಲೆಯ ಸಿಂಧಗಿಯವರು.ಕಳೆದ ಎರಡು ವರ್ಷಗಳಿಂದ ಬಾದಾಮಿ ವಲಯ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ವಿಜಯಪುರ ಹಾಗೂ ಬಾಗಲಕೋಟೆ ಅರಣ್ಯ ವಲಯಗಳಲ್ಲಿ ಕೆಲಸ ಮಾಡಿದ್ದಾರೆ.

ಖೇಡಗಿ ಅರಣ್ಯ ಇಲಾಖೆಯಲ್ಲಿ ಸಹಾಯಕ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ(ಎಆರ್‌ಎಫ್‌ಒ) ಕೆಲಸಕ್ಕೆ ಸೇರಿದ್ದರು. 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಇದೇ ಜೂನ್‌ ಅಂತ್ಯಕ್ಕೆ ನಿವೃತ್ತಿ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಬಾಗಲಕೋಟೆಯ ನವನಗರದ ಸೆಕ್ಟರ್ ನಂ 15 ರಲ್ಲಿರುವ ಅವರ ನಿವಾಸ, ಇಬ್ಬರು ಅಳಿಯಂದಿರ ಮನೆ, ಅಂಗಡಿ, ಬಾದಾಮಿಯ ಕಚೇರಿಯ ಮೇಲೆ ಏಕಕಾಲದಲ್ಲಿ ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದ ತಂಡ ಬುಧವಾರ ನಸುಕಿನಲ್ಲಿ ದಾಳಿ ನಡೆಸಿದೆ.

ಎಸಿಎಫ್ ಹುದ್ದೆ ನಿರಾಕರಣೆ: ಶಿವಾನಂದ ಖೇಡಗಿ ಅವರಿಗೆ ವರ್ಷದ ಹಿಂದೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗೆ ಬಡ್ತಿ ದೊರಕಿತ್ತು. ಬಹುತೇಕ ಸೇವೆ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಮಾಡಿರುವ ಅವರು, ಎಸಿಎಫ್ ಆದಲ್ಲಿ ಬೇರೆ ಕಡೆಗೆ ತೆರಳಬೇಕಾಗುತ್ತದೆ ಎಂದು ಬಡ್ತಿ ನಿರಾಕರಿಸಿ ಬರೆದುಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲಿ 3.17 ಕೆ.ಜಿವರೆಗೆ ಶ್ರೀಗಂಧ ಇಟ್ಟುಕೊಳ್ಳಬಹುದಾಗಿದೆ. ಖೇಡಗಿ ಅವರ ನಿವಾಸದಲ್ಲಿ 3 ಕೆ.ಜಿ ಶ್ರೀಗಂಧ ದೊರೆತಿದೆ ಎಂದು ಹೇಳಲಾಗಿದೆ. ಆದರೆ ಅದನ್ನು ಅಧಿಕೃತ ಸಂಸ್ಥೆಯಿಂದ ಖರೀದಿಸಿದ ಬಗ್ಗೆ ರಸೀದಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಅರಣ್ಯ ಸರಂಕ್ಷಣೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು 'ಪ್ರಜಾವಾಣಿ' ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT