ಬಾಗಲಕೋಟೆ: ‘2006ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಐದು ವರ್ಷ ಮಾತ್ರ ನಾವು ಅಧಿಕಾರದಲ್ಲಿದ್ದೆವು. ಉಳಿದ ಅವಧಿಗೆ ಬಿಜೆಪಿಯವರೇ ಅಧಿಕಾರದಲ್ಲಿದ್ದರು. 2006 ರಿಂದಲೇ ಎಲ್ಲವನ್ನೂ ತನಿಖೆ ಮಾಡಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನರಿಗೆ ಸತ್ಯ ಗೊತ್ತಾಗಲಿ. ಅವರ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ’ ಎಂದರು.
‘ಮೂರು ವರ್ಷಗಳಿಂದ ಅವರದ್ದೇ ಸರ್ಕಾರ ಇದೆ.ಇಷ್ಟು ದಿನ ಏಕೆ ಸುಮ್ಮನಿದ್ದರು? ಶೇ 40ರಷ್ಟು ಕಮಿಷನ್ ಬಗ್ಗೆ ಮಾತನಾಡಲು ಆರಂಭಿಸಿದ ಮೇಲೆ ಹೆದರಿಸಲು ಕಾಂಗ್ರೆಸ್ ಆಡಳಿತಾವಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ತನಿಖೆ ಮಾಡಬೇಡಿ ಎಂದು ಕೈಹಿಡಿದುಕೊಂಡಿದ್ದೇವೆಯೇ? ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಜನರ ಗಮನ ಬೇರೆಡೆ ಸೆಳೆಯಲು ಅರ್ಕಾವತಿ, ಸೋಲಾರ್ ಹಗರಣ ಬಯಲಿಗೆ ಎಳೆಯುತ್ತೇವೆ ಎಂದು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಮಾತು ನಿಲ್ಲಿಸಿ. ಮೊದಲು ತನಿಖೆ ಮಾಡಿಸಲಿ’ ಎಂದರು.
‘ಜನರು ಪ್ರವಾಹದಿಂದ ಸಾಯುತ್ತಿದ್ದಾರೆ. ಸಂಕಷ್ಟ ಎದುರಿಸುತ್ತಿದ್ದಾರೆ. ಬಿಜೆಪಿ ಸಚಿವರು ನೃತ್ಯ ಮಾಡುತ್ತಿದ್ದಾರೆ. ಇವರಿಗೆ ಮಾನ, ಮರ್ಯಾದೆ ಇದೆಯೇನ್ರಿ’ ಎಂದು ಪ್ರಶ್ನಿಸಿದರು.