ಮಹಾಲಿಂಗಪುರ: ‘ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತಾವರಣವಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಶ್ರಮಿಸಿದರೆ ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದ ಗೆಲುವು ನಮ್ಮದಾಗಲಿದೆ’ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದ ಉಮೇಶ ಪೂಜಾರಿ ಅವರ ತೋಟದ ಮನೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
‘ಘೋಷಣೆ ಮಾಡಿದ್ದೆಲ್ಲವನ್ನೂ ಈಡೇರಿಸುವ ದೇಶದ ಏಕೈಕ ಪಕ್ಷ ಕಾಂಗ್ರೆಸ್. ಪ್ರಸಕ್ತ ಲೋಕಸಭಾ ಚುನಾವಣೆಗಾಗಿ ಕ್ಷೇತ್ರದ ಎಲ್ಲ ಭಾಗಗಳ ಅವಶ್ಯಕತೆಗೆ ಅನುಸಾರ ಪ್ರತ್ಯೇಕ ಪ್ರಣಾಳಿಕೆ ರೂಪಿಸಲಾಗುವುದು’ ಎಂದರು.
ಸಿದ್ದು ಕೊಣ್ಣೂರ, ಲಕ್ಷ್ಮಣ ದೇಸಾರಟ್ಟಿ, ಸತ್ಯಜೀತ್ ಪಾಟೀಲ, ಶಿವಕುಮಾರ, ಸಿದ್ದು ಸಾಗಲಿಕರ, ಅಶೋಕ ಧಡೂತಿ, ವಿಠ್ಠಲ ಹೊಸಮನಿ, ಪ್ರವೀಣ ಪೂಜಾರಿ, ಸಿದ್ದಲಿಂಗ ಹಳಮನಿ, ರವಿ ದೊಡವಾಡ, ಅಡಿವೆಪ್ಪ ಪಾಟೀಲ, ಪರಪ್ಪಾ ಉರಬಿನವರ ಇದ್ದರು.
ಸೈದಾಪುರ ವರದಿ: ‘ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸೋಲುತ್ತ ಬಂದಿದೆ. ಈಗ ಇತಿಹಾಸ ಬದಲಿಸುವ ಕಾಲ ಕೂಡಿ ಬಂದಿದೆ. ಇದಕ್ಕಾಗಿ ಕಾರ್ಯಕರ್ತರು, ಮುಖಂಡರು ಬಹಳಷ್ಟು ಶ್ರಮಪಡಬೇಕಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಗ್ರಾಮದಲ್ಲಿ ಗುರುವಾರ ನಡೆದ ಸೈದಾಪುರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
‘ಕಾರ್ಯಕರ್ತರು, ಮುಖಂಡರು ಶ್ರಮ ವಹಿಸಿ ದುಡಿದಿದ್ದರೂ ಪಕ್ಷಕ್ಕೆ ಗೆಲುವು ದಕ್ಕಿಲ್ಲ. ಆದರೆ, ಈ ಬಾರಿ ಹೀಗಾಗಲ್ಲ. ನಾನು ಗಜಕೇಸರಿ ಯೋಗದಲ್ಲಿ ಜನಿಸಿದ್ದಲ್ಲದೇ, ಇದುವರೆಗೂ ಸೋತಿಲ್ಲ. ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.