ಬಾಗಲಕೋಟೆ:ನಗರದಲ್ಲಿ ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಮಂಗಳವಾತ ಹಾವು ಕಡಿದು ಮೃತಪಟ್ಟಿದ್ದಾರೆ.
ಇಲ್ಲಿನ ಸಿಕ್ಕೇರಿ ಕ್ರಾಸ್ ನಲ್ಲಿ ಹಾವು ಹಿಡಿಯಲು ಮುಂದಾದಾಗ ಅದು ಕಚ್ಚಿದ ಪರಿಣಾಮ ಡೇನಿಯಲ್ ಗಾಯಗೊಂಡಿದ್ದರು.. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡೇನಿಯಲ್ ನಿಧನರಾದರು.
ಕಳೆದ 10 ವರ್ಷಗಳಿಂದ ಹಾವು ಹಿಡಿಯುವ ಪ್ರವೃತ್ತಿ ಆರಂಭಿಸಿದ್ದ ಡೇನಿಯಲ್ ಅದರಲ್ಲಿ ಪರಿಣಿತಿ ಪಡೆದಿದ್ದರು.
ಯಾರಾದರೂ ಕರೆ ಮಾಡಿದರೆ ತಕ್ಷಣ ನೆರವಿಗೆ ಧಾವಿಸಿ ಹಾವುಗಳ ಹಿಡಿದು ಕಾಡಿಗೆ ಬಿಟ್ಟುಬರುತ್ತಿದ್ದರು. ಯಾರಿಂದಲೂ ಹಣ ಪಡೆಯುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಪ್ರೀತಿ ಗಳಿಸಿದ್ದರು.
ಎರಡು ತಿಂಗಳ ಹಿಂದೆ ನಗರದಲ್ಲಿಯೇ ನಾಗರಹಾವು ಹಾವು ಹಿಡಿಯುವಾಗ ಅದು ಕಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಒಂದು ವಾರ ಕಾಲ ಸಾವು-ಬದುಕಿನೊಂದಿಗೆ ಹೋರಾಡಿ ಚೇತರಿಸಿಕೊಂಡಿದ್ದರು.
ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದ ಡೇನಿಯಲ್ ಕೆಎಸ್ ಸಿಎ 14 ವರ್ಷದೊಳಗಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದರು. ಶ್ರೀನಿವಾಸನ್ ಟ್ರೋಫಿ ಯಲ್ಲಿ ಪಾಲ್ಗೊಂಡಿದ್ದರು.