ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಈಜು ಕಲಿಯಲು ಹೋಗಿದ್ದ ಗುಳೇದಗುಡ್ಡ ತಾಲ್ಲೂಕಿನ ಕೊಟ್ನೂರು ಗ್ರಾಮದ ಇಬ್ಬರು ಬಾಲಕರು ಶುಕ್ರವಾರ ಮಧ್ಯಾಹ್ನ ನೀರುಪಾಲಾಗಿದ್ದಾರೆ.
ಗ್ರಾಮದ ಬೈಲಪ್ಪ ಅಂಬಿಗೇರ ಅವರ ಪುತ್ರ ಮಲ್ಲೇಶ (12) ಹಾಗೂ ಮಲ್ಲಪ್ಪ ಉಪ್ಪಾರ ಅವರ ಪುತ್ರ ಮನೋಜ (10) ಸಾವಿಗೀಡಾದವರು. ಶಾಲೆಗೆ ರಜೆ ಇದ್ದ ಕಾರಣ ಇಬ್ಬರು ಈಜು ಕಲಿಯಲು ನದಿಗೆ ತೆರಳಿದ್ದರು. ಈ ವೇಳೆ ಸೆಳವಿಗೆ ಸಿಲುಕಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಗುಳೇದಗುಡ್ಡದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಶವಗಳನ್ನು ಹೊರತೆಗೆದು ಪಾಲಕರಿಗೆ ಒಪ್ಪಿಸಿದರು. ಈ ವೇಳೆ ಅವರ ರೋದನ ಮನಕಲಕಿತು. ಗುಳೇದಗುಡ್ಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.