ಕೂಡಲಸಂಗಮ: ಮಕ್ಕಳ ಪ್ರತಿಭೆ ಹೆಚ್ಚಿಸಲು ಸ್ಪೂರ್ತಿ, ಪ್ರೇರಣೆ ನೀಡುವ ಉದ್ದೇಶದಿಂದ ಜಾರಿಗೆ ತಂದ ಮಾದರಿ ಶಾಲೆ ಭೇಟಿ ಕಾರ್ಯಕ್ರಮ ಅಡಿಯಲ್ಲಿ ಅವಳಿ ಜಿಲ್ಲೆಯ 9 ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯ ವಾತಾವರಣ, ತರಗತಿಯ ಕೊಠಡಿ, ಪ್ರಯೋಗಾಲಯ, ಮೈದಾನ, ಉದ್ಯಾನವನ ವಿಕ್ಷಿಸಿ ಸಂಭ್ರಮಿಸಿದರು.
ಮಾದರಿ ಶಾಲೆ ಭೇಟಿಗೆ ಬಂದ ಶಿಕ್ಷಕರು, ವಿದ್ಯಾರ್ಥಿಗಳು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು. ಪ್ರತಿ ತರಗತಿ ಕೊಠಡಿ ವಿಕ್ಷಿಸಿ ಒಳ, ಹೊರಗೆ ಅಳವಡಿಸಿದ ಚಿತ್ರಪಟ ವಿಕ್ಷಿಸಿ ಮಾಹಿತಿ ಪಡೆದರು. ಶಾಲೆಯ ಶಿಸ್ತು, ಪರಿಸರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
’ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯು ಖಾಸಗಿ ಶಾಲೆಯನ್ನು ಮೀರಿಸುವಷ್ಟು ಅಭಿವೃದ್ಧಿ ಹೊಂದಿದೆ. ಇಲ್ಲಿಯ ಶಿಸ್ತು, ವಾತಾವರಣ, ಅಧ್ಯಯನ ಕ್ರಮ, ಚಿತ್ರಪಟಗಳು, ಪ್ರಯೋಗಾಲಯ ಬಹಳ ಇಷ್ಟವಾಯಿತು’ ಎಂದು ಬೀಳಗಿ ತಾಲೂಕಿನ ತೋಳಮಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಅನು ಭಾವಿ ಹೇಳಿದಳು.
‘ವಿಜಯಪುರ ಜಿಲ್ಲೆಯ 3, ಬಾಗಲಕೋಟೆಯ 6 ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ನಮ್ಮ ಶಾಲೆಗೆ ಒಂದು ತಿಂಗಳಲ್ಲಿ ಭೇಟಿ ನೀಡಿದ್ದಾರೆ. ಖಾಸಗಿ ಶಾಲೆಯ ಶಿಕ್ಷಕರು ವಿಕ್ಷಿಸಿ ಹೋಗಿದ್ದಾರೆ. ಇರುವ ಸಂಪನ್ಮೂಲಗಳಲ್ಲಿಯೇ ಶಾಲಾ ಎಸ್ಡಿಎಂಸಿ, ಇಲಾಖೆ ಅಧಿಕಾರಿಗಳು, ಶಿಕ್ಷಕರ ಸಹಕಾರದಿಂದ ಶಾಲೆಯನ್ನು ಅಭಿವೃದ್ಧಿ ಪಡಿಸಿದೆ. ಶಾಲೆ ವಿಕ್ಷಣೆಗೆ ಬೇರೆ ಶಾಲೆಯವರು ಬಂದಿರುವುದು ಸಂತಸ ಉಂಟುಮಾಡಿದೆ‘ ಎಂದು ಶಾಲೆಯ ಮುಖ್ಯಗುರು ಸಿ.ಎಸ್.ಚಟ್ಟೇರ ಹೇಳಿದರು.
ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಉತ್ತಮ ಕಲಿಕಾ ವಾತಾವರಣದ ಶಾಲೆ ನಿರ್ಮಿಸಬಹುದು ಎಂಬುದನ್ನು ಈ ಶಾಲೆಯ ಶಿಕ್ಷಕರು ಮುಖ್ಯಗುರುಗಳು ಮಾಡಿ ತೋರಿಸಿದ್ದಾರೆ
-ಮಹಾಂತೇಶ ಕೋಟಿ, ಹಿರಿಯ ಶಿಕ್ಷಕರು, ಎಂ.ಐ. ಹುರಕಡ್ಲಿ ಸರ್ಕಾರಿ ಪ್ರೌಢಶಾಲೆ ಚಿಕ್ಕಶೆಲ್ಲಿಕೇರಿ
ಪ್ರತಿಭೆಗೆ ಪ್ರೋತ್ಸಾಹ
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಶಿಕ್ಷಕರ ಸದನ ಬೆಂಗಳೂರ ಇವರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಮಾದರಿ ಶಾಲೆ ಭೇಟಿ ಯೋಜನೆ ಮಾಡಿದ್ದಾರೆ. ರಾಜ್ಯದ ಪ್ರತಿ ತಾಲ್ಲೂಕಿನ ಐದು ಸರ್ಕಾರಿ ಪ್ರೌಢ ಶಾಲೆಯ ತಲಾ 50 ವಿದ್ಯಾರ್ಥಿಗಳು ಮಾದರಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ಶೈಕ್ಷಣಿಕ ಚಟುವಟಿಕೆ ಅಭ್ಯಾಸ ವಾತಾವರಣ ವಿಕ್ಷಿಸಲು ಅವಕಾಶ ಕಲ್ಪಿಸಿದ್ದು. ಪ್ರತಿ ಶಾಲೆಗೆ ₹15 ಸಾವಿರ ಅನುದಾನ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.