ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಗಳಿಕೆವ್ವನ ಸಗಣಿ ಓಕುಳಿ

ನಮ್ಮ ಊರು ನಮ್ಮ ಜಿಲ್ಲೆ
Last Updated 18 ಆಗಸ್ಟ್ 2013, 11:16 IST
ಅಕ್ಷರ ಗಾತ್ರ

ಪೌರಾಣಿಕ ಹಿನ್ನೆಲೆಯುಳ್ಳ, ತಲೆತಲಾಂತರದಿಂದ ಆಚರಿಸಿಕೊಂಡು ಬಂದಿರುವ ಚಂಗಳಿಕೆವ್ವನ ಸಗಣಿ ಓಕುಳಿಯನ್ನು ಭೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದ ಮಹಿಳೆಯರು ಸೋಮವಾರ ಸಡಗರದಿಂದ ಆಚರಿಸಿ, ಪರಸ್ಪರ ಸಗಣಿ ಎರಚಿ ಸಂಭ್ರಮಿಸುತ್ತಾರೆ. ಈ ಸಂಭ್ರಮದ ಹಬ್ಬ ಇದೇ 19ರಂದು ನಡೆಯಲಿದೆ.

ಜನನ ಮರಣಗಳ ಚಕ್ರದ ನಡುವೆಯೇ ಮಾನವ ತನ್ನ ಬದುಕನ್ನು ಅರಳಿಸಿಕೊಳ್ಳಲು ನಿರಂತರ ಯತ್ನಿಸುತ್ತಾನೆ. ಕಷ್ಟ, ನೋವುಗಳ ಮಧ್ಯದಲ್ಲಿಯೇ ತನ್ನ ಜೀವನವನ್ನು ಆನಂದ, ಸುಖ, ಸಂತೋಷಗಳಿಗೆ ತಳುಕು ಹಾಕಿಕೊಂಡು ನೋವನ್ನು ಮರೆಯಲು ಹಾತೊರೆಯುತ್ತಾನೆ.

ತಾನು ಬೆವರು ಸುರಿಸುತ್ತಿರುವಾಗಲೇ ಆನಂದಾಶ್ರುಗಳನ್ನು ಸುರಿಸಿ ತನ್ನ ಬದುಕನ್ನು ಹಗುರು ಮಾಡಿಕೊಳ್ಳಲು ಧರ್ಮ, ದೇವರ ಹೆಸರಿನಲ್ಲಿ ಹಲವಾರು ಆಚರಣೆಗಳತ್ತ ಗಮನ ಹರಿಸುತ್ತಾನೆ. ಅವುಗಳಲ್ಲಿಯೇ ಮನರಂಜನೆಯನ್ನಿರಿಸಿಕೊಂಡು ನಕ್ಕು ನಲಿಯುತ್ತಾನೆ. ಇಂಥ ಮನರಂಜನೆಯ ಆಚರಣೆಗಳಲ್ಲಿ ಒಂದಾದ ಚೆಂಗಳಿಕೆವ್ವನ ಹೆಸರಿನಲ್ಲಿ ಮಹಿಳೆಯರೇ ಸ್ಪರ್ಧಾಳುಗಳಾಗಿ ಪ್ರತಿ ಸ್ಪರ್ಧಿಗಳ ಮೇಲೆ ಹೆಂಡಿ (ಸಗಣಿ) ಎರಚುವ ಹಬ್ಬ ಆಚರಿಸುತ್ತಾರೆ.

ಜಂಗಮ ರೂಪದಲ್ಲಿ ಭಿಕ್ಷೆಗೆ ಬಂದಿದ್ದ ಪರಮೇಶ್ವರನಿಗೆ ತನ್ನ ಮಗ ಚಿಲ್ಲಾಳನನ್ನೇ ಕೊಯ್ದು ಮಾಂಸದೆಡೆ ಮಾಡಿ ಉಣ ಬಡಿಸಿದ ಶಿವಭಕ್ತೆ ಚೆಂಗಳಿಕೆವ್ವ ಕೈಲಾಸದಲ್ಲಿ ಶಿವ ಗಣದೊಡನೆ ಅಹಂಕಾರದಿಂದ ವರ್ತಿಸಿದಳಂತೆ. ಆಗ ಶಿವ ಗಣಂಗಳು ಆಕೆಯ ಮುಖಕ್ಕೆ ಸಗಳಿ ಎರಚಿ ಅವಮಾನಿಸಿ ಆಕೆಯ ಗರ್ವ ಭಂಗ ಮಾಡಿದರಂತೆ. ಅದಕ್ಕಾಗಿಯೇ ಅಹಂಕಾರದಿಂದ ವರ್ತಿಸುವವರಿಗೆ `ಥೂ! ಅವ್ರ ಮುಖಕ್ಕೆ ಹೆಂಡಿ (ಸಗಣಿ)ಒಗೀಲೀ' ಎಂದು ಬೈಯ್ಯುತ್ತಾರೆ. ಈ ಪೌರಾಣಿಕ ಹಿನ್ನೆಲೆಯನ್ನಿಟ್ಟುಕೊಂಡೇ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ಚೆಂಗಳಿಕೆವ್ವನ ಹೆಸರಿನಲ್ಲಿ ಮಹಿಳೆಯರೇ ಸಗಣಿ ಎರಚಾಡುತ್ತಾರೆ.

ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿಯ ನಂತರ ಬರುವ ಸೋಮವಾರ ಈ ಹಬ್ಬ ಆಚರಿಸುತ್ತಾರೆ. ಅದಕ್ಕಿಂತಲೂ ಮುಂಚೆಯೇ ಪಂಚಮಿ ಹಬ್ಬದಂದು ಗ್ರಾಮದ ಸಂಗಮೇಶ್ವರ ದೇವಸ್ಥಾನದ ಎದುರು ಚೆಂಗಳಿಕೆವ್ವನನ್ನು ಪ್ರತಿಷ್ಠಾಪಿಸಿ ದಿನಂಪ್ರತಿ ಪೂಜೆ ಆರತಿ ಮಾಡುತ್ತಿರುತ್ತಾರೆ. ಸೋಮವಾರ ಇನ್ನೂ ಮುಂದಿರುವಾಗಲೇ ಸಗಣಿ ಎರಚಾಡುವ ಎರಡು ಬಣದವರು ಸಗಣಿ ಸಂಗ್ರಹಿಸಿಡುತ್ತಾರೆ.

ಹಬ್ಬದ ದಿನ ಮುಖ್ಯ ರಸ್ತೆಯಲ್ಲಿ ಕಂಬಗಳನ್ನು ನೆಟ್ಟು, ಕಂಬಗಳಿಗೆ ಹಗ್ಗಗಳನ್ನು ಕಟ್ಟಿ ಎರಡು ಪ್ರತ್ಯೇಕ ಅಂಕಣಗಳನ್ನು ನಿರ್ಮಿಸುತ್ತಾರೆ. ಬಾಜಾ ಭಜಂತ್ರಿಯವರು ಎರಡೂ ತಂಡಗಳನ್ನು ಪ್ರತ್ಯೇಕವಾಗಿ ಕರೆತಂದ ನಂತರ ಎರಡೂ ತಂಡಗಳ ಮುಂಚೂಣಿ ನಾಯಕರಾಗಿರುವ ವಾಲಾಡಮ್ಮಗಳು (ಅಡಗೊಡ್ಡಿಗಳು) ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದಂತೆ ವೇಷ ಭೂಷಣ ಮಾಡಿಕೊಂಡು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. 

ಹರಿದ ಬಟ್ಟೆ, ತರಕಾರಿಯಿಂದ ಮಾಡಿದ ಹಾರ, ಹರಕು ಬುಟ್ಟಿ, ಪೊರಕೆಗಳನ್ನು ಪರಸ್ಪರ ಆಯೇರಿ ಮಾಡಿ ಜನರನ್ನು ರಂಜಿಸುತ್ತಾರೆ. ನಂತರ ಪ್ರಮುಖನೊಬ್ಬ ಕೈಯ್ಯಲ್ಲಿ ಸಗಣಿ ಹಿಡಿದು ಎರಡೂ ಅಂಕಣಗಳತ್ತ ಇಷ್ಟಿಷ್ಟು ಎರಚುತ್ತಾನೆ. ಎಂದರೆ ಇದು ವಿಧ್ಯುಕ್ತವಾಗಿ ಉದ್ಘಾಟನೆಯಾದಂತೆ.

ತಕ್ಷಣ ಮಹಿಳೆಯರು ತಮ್ಮ ಎದುರಾಳಿ ತಂಡದ ಮೇಲೆ ಸಗಣಿ ಎಸೆಯಲಾರಂಭಿಸುತ್ತಾರೆ. ಇಲ್ಲಿಂದ ಎಸೆದಷ್ಟು ಸಗಣಿ ಆ ಕಡೆಯಿಂದ ಬಂದು ಸಂಗ್ರಹವಾಗುತ್ತಿರುತ್ತದೆ. ಮಹಿಳೆಯರ ಮುಖ, ಕೈ, ಕಾಲು ಎಲ್ಲ ಸಗಣಿಯಿಂದ ತುಂಬಿಕೊಂಡು ಬಿಟ್ಟಿರುತ್ತವೆ. ಕೂಡಿದ ಪ್ರೇಕ್ಷಕರು ಇವರನ್ನು ಹುರಿದುಂಬಿಸುತ್ತಲೇ ಇರುವುದರಿಂದ ಮೇರೆ ಮೀರಿ ಇವರ ಸಗಣಿಯ ಎರಚಾಟ ನಡೆದಿರುತ್ತದೆ.

ಸ್ವಲ್ಪ ಹೊತ್ತಿನ ನಂತರ ಮುಖಂಡರು ಮಧ್ಯ ಪ್ರವೇಶಿಸಿ ಕದನ ವಿರಾಮ ಘೋಷಣೆಗೆ ಯತ್ನಿಸುತ್ತಾರೆ. ಅಗ ಅವರ ಸ್ಥಿತಿಯಂತೂ ಹೇಳುವುದೇ ಬೇಡ. ಯಾಕೆಂದರೆ ಎರಡೂ ತಂಡಗಳ ಸಗಣಿಯ ದಾಳಿ ಇವರ ಮೇಲಾಗುತ್ತಿರುವುದರಿಂದ ಗುರುತು ಸಿಗದಷ್ಟು ಸಗಣಿ ಅವರನ್ನು ಆವರಿಸಿಕೊಂಡು ಬಿಟ್ಟಿರುತ್ತದೆ.

ಆಗ ಬಾಜಾ ಭಜಂತ್ರಿಯವರು ಸ್ವರ ಹೊರಡಿಸುತ್ತಿದ್ದಂತೆಯೇ ಚಂಗಳಿಕೆವ್ವನನ್ನು ಎತ್ತಿ ಬಿಡುತ್ತಾರೆ. ನಂತರ ಎಲ್ಲರೂ ಹೊಳೆಗೆ ಹೋಗಿ ಕೈ ಕಾಲು, ಮುಖ ತೊಳೆದುಕೊಂಡು ಬರುತ್ತಾರೆ. ಅಷ್ಟೊತ್ತಿನವರೆಗೆ ಶತ್ರುಗಳಾಗಿ ಪರಸ್ಪರ ಕಾದಾಡಿದ ವೀರ ವನಿತೆಯರು ಯುದ್ಧದ ರಸ ನಿಮಿಷಗಳನ್ನು ಹಂಚಿಕೊಳ್ಳುತ್ತ ನಗುತ್ತಾ ಬರುತ್ತಿರುತ್ತಾರೆ. ನಂತರ ಚಂಗಳಿಕೆವ್ವನ ಮಗ ಚಿಲ್ಲಾಳನನ್ನು ತೊಟ್ಟಿಲಿಗೆ ಹಾಕಿ ನಾಮಕರಣ ಮಾಡುತ್ತಾರೆ.

ಮನೆಗೆ ಹೋಗುವಾಗ ಓಕುಳಿಯ ಅಂಕಣದಲ್ಲಿ ಬಿದ್ದ ಸಗಣಿಯನ್ನು ಎಲ್ಲರೂ ಇಷ್ಟಿಷ್ಟು ತೆಗೆದುಕೊಂಡು ಹೋಗುತ್ತಾರೆ. ಈ ಸಗಣಿಹೊಲಕ್ಕೆ ಹಾಕುವುದರಿಂದ ಹೊಲಗಳು ಹುಲುಸಾಗಿ ಬೆಳೆಯುತ್ತವೆ. ಬೆಳೆಗಳಿಗೆ ಕ್ರಿಮಿ ಕೀಟಗಳ ಬಾಧೆ ತಗುಲುವುದಿಲ್ಲ ಎನ್ನುವುದು ಗ್ರಾಮೀಣ ಜನರ ನಂಬುಗೆ.

ಇಂದಿನ ದಿನಗಳಲ್ಲಿ ಮರೆಯಾಗುತ್ತಿರುವ ಜಾನಪದ ಆಚರಣೆಗಳಲ್ಲಿ ಗಿರಿಸಾಗರ ಗ್ರಾಮಸ್ಥರು ಇಂದಿಗೂ ಚೆಂಗಳಿಕೆವ್ವನನ್ನು  ಉಳಿಸಿಕೊಂಡು, ಪೂಜಿಸುತ್ತ ಹೊರಟಿದ್ದಾರೆ. ಗ್ರಾಮದ ಮಹಿಳೆಯರು ಅಧುನಿಕತೆಯೊಡನೆ ಚೆಂಗಳಿಕೆವ್ವನನ್ನು ತಮ್ಮಡನೆ ಕರೆದುಕೊಂಡು ಮುಂದೆ ಸಾಗುತ್ತಾರೆಯೋ ಕಾದು ನೋಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT