ಬಾಗಲಕೋಟೆ: ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಹೊಸ ತಂತ್ರಜ್ಞಾನದ ಮೂಲಕ ನಿಯೋಜಿತ ಎಲ್ಲ ಹಳ್ಳಿಗಳಿಗೂ ಸಮಾನ ನೀರು ಪೂರೈಕೆ ಮಾಡಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ತಾಲ್ಲೂಕಿನ ಹಿರೇಗುಳಬಾಳದ ಪುನರ್ವಸತಿ ಕೇಂದ್ರದ ಬಳಿ ₨ 11.37 ಕೋಟಿ ವೆಚ್ಚದ ಲವಳೇಶ್ವರ ಇತರ 11 ಹಳ್ಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ರಾಜೀವ್ಗಾಂಧಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಅನುದಾನ ಮಂಜೂರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಶ್ರಯದಲ್ಲಿ ಯೋಜನೆ ಕೈಗೊಳ್ಳುತ್ತಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದರು.
ಈ ಹಿಂದೆ ಕೈಗೊಂಡ ಕೆಲ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಲ್ಲಿ ಮೊದಲ ಹಳ್ಳಿಗೆ ಹೆಚ್ಚಿನ ನೀರು ಪೂರೈಕೆಯಾಗುತ್ತದೆ. ಕೊನೆ ಹಳ್ಳಿಗಳಿಗೆ ನೀರೇ ಬರುವುದಿಲ್ಲ. ಆದ್ದರಿಂದ ಹೊಸ ತಂತ್ರಜ್ಞಾನದ ಮೂಲಕ ಜನಸಂಖ್ಯೆ ಆಧಾರದ ಮೇಲೆ ಆಯಾ ಗ್ರಾಮಕ್ಕೆ ಎಷ್ಟು ನೀರು ಪೂರೈಕೆಯಾಗಬೇಕೋ ಅಷ್ಟು ಆ ದಿನಕ್ಕೆ ಪೂರೈಸುವ ತಂತ್ರಜ್ಞಾನ ಬಳಸಬೇಕು ಎಂದರು.
ಯೋಜನೆಯ ಕಾಮಗಾರಿ ಕೈಗೊಳ್ಳುವ ಜತೆಗೆ ಐದು ವರ್ಷಗಳ ನಿರ್ವಹಣೆಯನ್ನೂ ಗುತ್ತಿಗೆದಾರರೇ ಮಾಡಬೇಕು. ಇದರಲ್ಲಿ ದೋಷ ಕಂಡುಬಂದರೆ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಹಳ್ಳಿ ಜನರಿಗೆ ನೀರು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಲವಳೇಶ್ವರ ಬಹುಬಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಆಲೂರ, ಜಡ್ರಾಮಕುಂಟಿ, ಮುಡಪಲಜೀವಿ, ಕಡ್ಲಿಮಟ್ಟಿ, ಚಿಕ್ಕಹೊದ್ಲೂರ, ಚಿಕ್ಕಮುರಮಟ್ಟಿ, ಚಿಕ್ಕಗುಳಬಾಳ, ಹಿರೇಹೊದ್ಲೂರ, ಹಿರೇಮುರಮಟ್ಟಿ, ಹಿರೇಗುಳಬಾಳ, ಜಡ್ರಾಮಕುಂಟಿ ತಾಂಡಾಕ್ಕೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.
ಗುಳಬಾಳ ಗ್ರಾಮಕ್ಕೆ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಕಾಮಗಾರಿ ನಡೆದಿದೆ. 15 ದಿನದಲ್ಲಿ ಕಾಮಗಾರಿ ಪೂರ್ಣಗೊಂಡು ಗ್ರಾಮಸ್ಥರಿಗೆ ₨ 2ಗೆ 20 ಲೀ. ಶುದ್ಧ ನೀರು ದೊರೆಯಲಿದೆ. ಅಲ್ಲದೇ ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಳ್ಳಿ, ತಾಂಡಾ ಸೇರಿದಂತೆ 90 ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವಂತ ಮೇಟಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಕೆ. ಗಾಣಿಗೇರ, ವ್ಯವಸ್ಥಾಪಕ ಸತೀಶ ನಾಯಕ, ಗ್ರಾ.ಪಂ. ಅಧ್ಯಕ್ಷ ಹನುಮಂತ ಮೇಟಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಎಂಜಿನಿಯರ್ ಟಿ. ವಿ. ಬಳೂಲದ, ನಿಪ್ಪಾಣಿಯ ಗುತ್ತಿಗೆದಾರ ಬಿ.ಆರ್. ಪಾಟೀಲ, ಹಿರೇಗುಳಬಾಳದ ಪ್ರಮುಖರಾದ ಬಸಯ್ಯ ಕಲ್ಯಾಣಮಠ, ಟಿ.ಪಿ. ಪಾಟೀಲ, ಮಹಾದೇವಪ್ಪ ವಾಲಿಕಾರ, ವೆಂಕಟೇಶ ಸೂರ, ಸಿಂಧೂರಪ್ಪ ವಾಲಿಕಾರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.