ಹೊಸಪೇಟೆ: ‘ಜ. 15ರಂದು ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ತಹಶೀಲ್ದಾರ್ ಎಚ್. ವಿಶ್ವನಾಥ್ ತಿಳಿಸಿದರು.
ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನಡೆದ ವೇಮನ ಜಯಂತಿ, ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಹಾಗೂ ಅಂಬಿಗರ ಚೌಡಯ್ಯನವರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಅಂದು ಬೆಳಿಗ್ಗೆ 10ಕ್ಕೆ ಎಂ.ಜೆ. ನಗರದ ಭೋವಿ ಕಾಲೇಜಿನಿಂದ ವಿಜಯನಗರ ಕಾಲೇಜು ಮಾರ್ಗವಾಗಿ ಪ್ರಮುಖ ರಸ್ತೆ ಮೂಲಕ ನಗರಸಭೆ ಕಚೇರಿ ವರೆಗೆ ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಬಳಿಕ ಅಲ್ಲಿ ಪೂಜೆ ನೆರವೇರಿಸಿದ ನಂತರ ಉಪನ್ಯಾಸ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ನೆರವೇರಲಿದೆ’ ಎಂದು ತಿಳಿಸಿದರು.
‘ಜ.19ರಂದು ವೇಮನ ಜಯಂತಿ ಆಚರಿಸಲಾಗುವುದು.ಜ. 21ರಂದು ಶರಣ ಅಂಬಿಗರ ಚೌಡಯ್ಯನವರ ಜಯಂತಿ ಪ್ರಯುಕ್ತ ನಗರದ ದೋಭಿಘಾಟ್ನಿಂದ ಕಾರ್ಯಕ್ರಮ ನಡೆಯಲಿರುವ ನಗರಸಭೆ ಕಚೇರಿ ವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ಉಪನ್ಯಾಸ ಕಾರ್ಯಕ್ರಮ ಜರುಗುವುದು. ಮೆರವಣಿಗೆ ಕುರಿತು ಸಮುದಾಯದ ಮುಖಂಡರು ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿದರು.
ಮುಖಂಡರಾದ ರಾಮಾಲಿ ಮಂಜು, ತಿಪ್ಪೇಸ್ವಾಮಿ, ವಿ.ಹನುಮಂತಪ್ಪ, ಡಿ.ವೆಂಕಟರಮಣ, ಹೇಮಣ್ಣ, ರಾಮಾಂಜಿನಿ,ಸದಾಶಿವ ರೆಡ್ಡಿ, ಅಭಿಮನ್ಯು, ಮಡ್ಡಿ ಹನುಮಂತಪ್ಪ, ಸುಭಾಷಚಂದ್ರ, ಮಡ್ಡಿ ಉಮಾಪತಿ, ಬಿ.ಸಿ.ಎಂ. ಅಧಿಕಾರಿ ಎರ್ರಿಸ್ವಾಮಿ, ಗ್ರಾಮೀಣ ಸಿಪಿಐ ಡಿ. ಹುಲುಗಪ್ಪ ಇದ್ದರು.