ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ | ಮದುವೆ ಆರತಕ್ಷತೆಯ ಊಟ ಸೇವನೆ: 92 ಜನ ಅಸ್ವಸ್ಥ

ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಶಂಕರ್ ನಾಯ್ಕ ಭೇಟಿ
Published 28 ಏಪ್ರಿಲ್ 2024, 15:54 IST
Last Updated 28 ಏಪ್ರಿಲ್ 2024, 15:54 IST
ಅಕ್ಷರ ಗಾತ್ರ

ಅರಸೀಕೆರೆ: ಹೋಬಳಿಯ ಸಿಂಗ್ರಿಹಳ್ಳಿ ಗ್ರಾಮದಲ್ಲಿ ನಡೆದ ಮದುವೆ ಆರತಕ್ಷತೆಯ ಊಟ ಸೇವಿಸಿದ 92 ಜನ ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ. ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏ.26 ರಂದು ಹರಪನಹಳ್ಳಿಯ ಗರ್ಭಗುಡಿ ಗ್ರಾಮದ ವರನ ಮನೆಯಲ್ಲಿ ಮದುವೆ ನೆರವೇರಿತ್ತು. ಶನಿವಾರ ಸಿಂಗ್ರಿಹಳ್ಳಿ ಗ್ರಾಮದ ವಧುವಿನ ಮನೆಯಲ್ಲಿ ಏರ್ಪಡಿಸಿದ್ದ ಮದುವೆ ಆರತಕ್ಷತೆ ಊಟದ ಸಮಾರಂಭದಲ್ಲಿ ಭಾಗವಹಿಸಿದ್ದ ಬಂಧುಗಳು ಲಡ್ಡು, ಪಾಯಸ, ಪಲ್ಯ, ಅನ್ನ ಸಾಂಬಾರ್ ಸೇವಿಸಿದ್ದರು. ಊಟ ಸೇವಿಸಿದ ನಂತರ, 10 ಗಂಟೆ ಸುಮಾರಿಗೆ ಹೊಟ್ಟೆ ನೋವು ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ.

ತಕ್ಷಣ ಗ್ರಾಮದ ಆಟೋ, ಟ್ರ್ಯಾಕ್ಟರ್, ಕಾರು, ಬೈಕ್‌ಗಳಲ್ಲಿ ಬಂದು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಶಂಕರ್ ನಾಯ್ಕ, ‘ಮದುವೆ ಆರತಕ್ಷತೆ ಊಟ ಸೇವಿಸಿದ 92 ಜನರಲ್ಲಿ ವಾಂಧಿ, ಭೇದಿ ಶುರುವಾಗಿದೆ. ಅದರಲ್ಲಿ 30 ಮಕ್ಕಳು ಸೇರಿದ್ದು, ಉಳಿದವರು ಸ್ತ್ರೀ ಹಾಗೂ ಪುರುಷರಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಊಟದ ಪದಾರ್ಥ ಹಾಗೂ ಕುಡಿಯುವ ನೀರನ್ನು ತಪಾಸಣೆಗೆ ಕೊಂಡೊಯ್ಯುತ್ತಿದ್ದು ವರದಿ ಬಂದ ಬಳಿಕ ಘಟನೆಯ ನಿಖರ ಮಾಹಿತಿ ಬರಲಿದೆ’ ಎಂದು ಅವರು ಮಾಹಿತಿ ನೀಡಿದರು.

ಹರಪನಹಳ್ಳಿ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿದರು. ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ವಿಧಾನಸಭೆ ಪರಾಜಿತ ಅಭ್ಯರ್ಥಿ ಅರಸೀಕೆರೆ ಎನ್.ಕೊಟ್ರೇಶ್ ಭೇಟಿ ನೀಡಿ ಅಸ್ವಸ್ಥರ ಕುಶಲೋಪರಿ ವಿಚಾರಿಸಿ, ಹಣ್ಣು ವಿತರಿಸಿದರು. ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ಎಸ್.ಎಂ ಸಮರ್ಥ ಭೇಟಿ ನೀಡಿದರು.

‘ನೂರಕ್ಕೂ ಹೆಚ್ಚು ಮಂದಿ ಊಟ ಸೇವಿಸಿದ್ದು, ಸಿಹಿ ಪದಾರ್ಥ ಸೇವನೆ ಮಾಡಿದವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ವಧು ಅನ್ನ ಮತ್ತು ಸಾಂಬಾರ್ ಊಟ ಸೇವನೆ ಮಾಡಿದ್ದು ಅವರು ಆರೋಗ್ಯವಾಗಿದ್ದಾರೆ. ಆದರೆ, ಸಿಹಿ ಪದಾರ್ಥದ ಜೊತೆಗೆ ಅನ್ನ, ಸಾಂಬಾರ್ ಸೇವನೆ ಮಾಡಿದ್ದ ವರ ಅಸ್ವಸ್ತಗೊಂಡಿದ್ದಾರೆ’ ಎಂದು ಅಸ್ವಸ್ಥಗೊಂಡು ಚಿಕತ್ಸೆ ಪಡೆಯುತ್ತಿರುವ ಪಕ್ಕೀರ ರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಧುವಿನ ಕಡೆಯವರೇ ಅಧಿಕ: ‘92 ಜನರಲ್ಲಿ 75 ಜನರು ಸಿಂಗ್ರಿಹಳ್ಳಿ ಗ್ರಾಮದ ವಧುವಿನ ಕುಟುಂಬಸ್ಥರಾಗಿದ್ದಾರೆ. ಉಳಿದ 17 ಜನರು ಹರಪನಹಳ್ಳಿ ಗರ್ಭಗುಡಿಯ ವರನ ಕಡೆಯವರು. ಚಿಗಟೇರಿ ಆಸ್ಪತ್ರೆಯಲ್ಲಿ ಸಕಾಲದಲ್ಲಿ ವೈದ್ಯರು ಚಿಕಿತ್ಸೆ ನೀಡಿ, ಸಹಕಾರ ನೀಡುತ್ತಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಗ್ರಾಮದ ಜಯಪ್ಪ ಹೇಳಿದರು.

ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT