ಕಂಪ್ಲಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರ ನೇತ್ರ ಉಚಿತ ತಪಾಸಣೆ ಶಿಬಿರ ಶನಿವಾರ ಜರುಗಿತು.
150 ಜನರ ನೇತ್ರ ತಪಾಸಣೆ ನಡೆಸಿದ ನೇತ್ರ ತಜ್ಞೆ ಡಾ. ಸಿವಾಂಗಿ ಅವರು 96 ಜನರ ಶಸ್ತ್ರ ಚಿಕಿತ್ಸೆಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಶಿಫಾರಸು ಮಾಡಿದರು.
ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಕೃಷ್ಣ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗುವವರ ಸಾರಿಗೆ, ವಸತಿ ಸೇರಿ ಎಲ್ಲ ವೆಚ್ಚಗಳನ್ನು ಆಸ್ಪತ್ರೆ ಭರಿಸುತ್ತದೆ’ ಎಂದು ವಿವರಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಧಿಕಾ, ಸಿಬ್ಬಂದಿ ಚನ್ನಬಸಪ್ಪ, ಬಸವರಾಜ, ಕಣ್ಣಿನ ಆಸ್ಪತ್ರೆಯ ಶಿವಪ್ರಸಾದ್, ಕುಮುದಾ, ಸುಪ್ರಿಯಾ, ಶ್ವೇತಾ, ಶಶಿಕಲಾ ಇದ್ದರು.