ಬಳ್ಳಾರಿ: ಕಾಂಗ್ರೆಸ್ ಮುಖಂಡ ಟಿ.ಜಿ ಎರ್ರಿಸ್ವಾಮಿ ಎಂಬುವವರು ತಮಗೆ ಮೇಯರ್ ಹುದ್ದೆ ಕೊಡಿಸುವುದಾಗಿ ಆಮಿಷ ತೋರಿಸಿ₹ 3.5 ಕೋಟಿ ಹಣ ಪಡೆದು ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಮಹಾನಗರ ಪಾಲಿಕೆ 30ನೇ ವಾರ್ಡ್ ಸದಸ್ಯ ಎನ್ಎಂಡಿ ಆಸೀಫ್ ಬಾಷಾ ಕೌಲ್ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೇಯರ್– ಉಪ ಮೇಯರ್ ಚುನಾವಣೆ ಸಮಯದಲ್ಲಿ ಭಾರಿ ಹಣ ಕೈಬದಲಾವಣೆ ಆಗಿರುವ ಆರೋಪ ಕೇಳಿಬಂದಿತ್ತು. ಆಸೀಫ್ ಬಾಷಾ ಪೊಲೀಸರಿಗೆ ದೂರು ನೀಡುವುದರೊಂದಿಗೆ ಆರೋಪಕ್ಕೆ ಬಲ ಬಂದಂತಾಗಿದೆ.
ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆನಂತರ ಮೀಸಲಾತಿ ಬದಲಾವಣೆ ಆಗಿದ್ದು, ಆಸೀಫ್ ಬಾಷಾ ಹಣ ವಾಪಸ್ ಕೊಡುವಂತೆ ಎರ್ರಿಸ್ವಾಮಿ ಅವರನ್ನು ಕೇಳಿದಾಗಲೆಲ್ಲಾ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.
2021ರಲ್ಲಿ ಹಣದ ವ್ಯವಹಾರ ನೀಡಿದ್ದು, ಅಂದಿನಿಂದಲೂ ಹಣ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆಸೀಫ್ ಬಾಷಾ ಹೇಳಿದ್ದಾರೆ. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ವಾಸು ಕುಮಾರ್ ತನಿಖೆ ಕೈಗೊಂಡಿದ್ದಾರೆ.