ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹೊಸ ಆನಂದೇವನಹಳ್ಳಿ ಡಾಬಾದ ಬಳಿ ಶುಕ್ರವಾರ ಕರಡಿಯೊಂದು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು.
ಗ್ರಾಮದ ಹೊರಗೆ ಜಮೀನು ಒಂದರಲ್ಲಿ ಕೊಳಬೆ ಬಾವಿಯ ನೀರು ಕುಡಿಯಲು ಆಗಾಗ್ಗೆ ಬರುತ್ತಿತ್ತು, ಆದರೆ ಇಂದು ಏಕಾಏಕಿ ನೋಡಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಅದನ್ನು ಆನೆಕಲ್ಲು ಅರಣ್ಯ ಪ್ರದೇಶದಲ್ಲಿರುವ ಗುಡ್ಡತಿಮ್ಮಪ್ಪನ ದೇವಸ್ಥಾನದ ಬಳಿಗೆ ಓಡಿಸಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಕರಿಬಸಪ್ಪ ತಿಳಿಸಿದರು.
ಈಚೆಗೆ ಪಟ್ಟಣದ ಸುತ್ತಮುತ್ತಲೂ ಕರಡಿಗಳು ಪ್ರತ್ಯಕ್ಷವಾಗುತ್ತಿವೆ. ಅರಣ್ಯ ಪ್ರದೇಶದಲ್ಲಿ ಕುಡಿಯಲು ನೀರು ಇಲ್ಲದಿರುವುದರಿಂದ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದರು.