ಅರಸೀಕೆರೆ: ಕಳೆದ ವರ್ಷ ಎಲೆಕೋಸು (ಕ್ಯಾಬೇಜ್) ಬೆಳೆದು ನಷ್ಟ ಅನುಭವಿಸಿದ್ದ ರೈತ ಪುನಃ ಈಗ ಅದನ್ನೇ ಬೆಳೆದು ಭರಪೂರ ಆದಾಯಗಳಿಸಿದ್ದಾರೆ.
ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರು ತಮ್ಮ ಎರಡು ಎಕರೆಯಲ್ಲಿ ಸುತ್ತಲೂ ತೆಂಗು ಹಾಕಿದ್ದಾರೆ. ಈ ಪೈಕಿ ಉಳಿದ ಭೂಮಿಯಲ್ಲಿ ಎಲೆಕೋಸು (ಕ್ಯಾಬೇಜ್) ಬೆಳೆದು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.
ತೇವಾಂಶ ಕೊರತೆಯ ನಡುವೆಯೂ 30 ಟನ್ಗೂ ಹೆಚ್ಚು ಎಲೆಕೋಸು ಇಳುವರಿ ಬಂದಿದೆ. ಮೊದಲ ಹಂತದ 20 ಟನ್ ಕಟಾವಿಗೆ ಪ್ರತಿ ಕೆ.ಜಿ.ಗೆ ₹ 16 ದೊರಕಿದೆ. ಎರಡನೇ ಹಂತದ ಕಟಾವಿಗೆ ₹ 17 ದೊರಕಿದೆ. ಒಟ್ಟು 30 ಟನ್ಗೆ ₹ 4,90,000 ಆದಾಯ ದೊರಕಿದೆ.
ರೈತ ಮೇಘರಾಜಪ್ಪ ಕ್ಯಾಬೇಜ್ ಬೆಳೆಯಲು ಬೀಜ, ಗೊಬ್ಬರ, ಔಷಧ ಸೇರಿ ಒಟ್ಟು ₹ 50 ಸಾವಿರ ಖರ್ಚು ಮಾಡಿದ್ದಾರೆ. ಬೆಳೆದ ಬೆಳೆಯನ್ನು ದೂರದ ಕೊಲ್ಕೊತ್ತಾ, ಚೆನ್ನೈ, ಹೈದರಾಬಾದ್, ಕಲ್ಲಿಕೋಟೆ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ವ್ಯಾಪಾರಿಗಳು ಇಲ್ಲಿಯೇ ಖರೀದಿಸಿ ಕೊಂಡೊಯ್ಯುವುದರಿಂದ ಸಾಗಣೆ ವೆಚ್ಚ ಉಳಿಯುತ್ತಿದೆ.
‘ಕಳೆದ ವರ್ಷ ಎಲೆಕೋಸು ಬೆಲೆ ಕೆ.ಜಿಗೆ ₹ 1.5 ಕನಿಷ್ಠ ಬೆಲೆಗೆ ತಲುಪಿತ್ತು. ಕಟಾವು ಮಾಡುವ ಕೂಲಿಗೂ ಸಾಲುತ್ತಿರಲಿಲ್ಲ. ಬೀಜ, ಗೊಬ್ಬರದ ಖರ್ಚು ಬರುವುದು ಕನಸಿನ ಮಾತಾಗಿತ್ತು. ಆದ್ದರಿಂದ ಹೊಲದಲ್ಲಿಯೇ ಬೆಳೆಯನ್ನು ನಾಶ ಪಡಿಸಿದೆ.
‘ಸದ್ಯ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಬೆಳೆದ ಎಲೆಕೋಸಿಗೂ ದರ ಬಂದಿದೆ. ಲಾಭ ನಷ್ಟದ ಲೆಕ್ಕ ಹಾಕದೇ, ಬೆಳೆ ಬೆಳೆದರೆ ಭೂ ತಾಯಿ ಕೈ ಹಿಡಿಯುತ್ತಾಳೆ. ಲಾಭವೂ ಕೈ ಸೇರುತ್ತದೆ’ ಎನ್ನುತ್ತಾರೆ ರೈತ ಮೇಘರಾಜಪ್ಪ.