ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಅರುಣ್ ಹಿರೇಹಾಳ್ ಅವರು ಶನಿವಾರ ಚುನಾವಣಾ ಆಯೋಗ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ಗೆ ದೂರು ನೀಡಿದ್ದಾರೆ.
ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಶನಿವಾರ ನಡೆಯಿತು. ಈ ವೇಳೆ ಕ್ಷೇತ್ರದ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಮ್ ಅವರ ನಾಮಪತ್ರದಲ್ಲಿ ದೋಷಗಳಿವೆ ಎಂದು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರ ವಕೀಲರು ಚುನಾವಣಾಧಿಕಾರಿಗಳ ಗಮನಕ್ಕೆ ತಂದರು. ದೂರಿನ ಬಗ್ಗೆ ಪರಾಮರ್ಶೆ ನಡೆಸಿ, ತುಕಾರಾಮ್ ಅವರಿಂದ ಸ್ಪಷ್ಟನೆ ಪಡೆದು ಮಧ್ಯಾಹ್ನ 3 ಗಂಟೆ ಆದೇಶ ನೀಡುವುದಾಗಿ ಚುನಾವಣಾಧಿಕಾರಿ ಅಭ್ಯರ್ಥಿಗಳಿಗೆ ತಿಳಿಸಿದ್ದರು.
ಆದರೆ ಮಧ್ಯಾಹ್ನ 3ಗಂಟೆಗೆ ಆದೇಶ ನೀಡುವ ಹೊತ್ತಿಗೆ ಆಗಮಿಸಿದಾಗ ಪಕ್ಷೇತರ ಅಭ್ಯರ್ಥಿ ಅರುಣ್ ಹಿರೇಹಾಳ್ ಅವರನ್ನು ಕಚೇರಿಗೆ ಬಿಡದೇ ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಚುನಾವಣಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ.
‘ಇ. ತುಕಾರಾಮ್ ಅವರ ಅಫಿಡವಿಟ್ನಲ್ಲಿನ ದೋಷಕ್ಕೆ ಸಂಬಂಧಿಸಿದ ಆದೇಶವು ಪಕ್ಷೇತರ ಅಭ್ಯರ್ಥಿಯಾದ ನನ್ನ ಸ್ಪರ್ಧೆಯ ಮೇಲೂ ಪ್ರಭಾವ ಬೀರುತ್ತದೆ. ಈ ಆದೇಶ ನೀಡುವಾಗ ನನ್ನನ್ನು ಹೊರಗಿಟ್ಟಿದ್ದು ಸರಿಯಾದ ಕ್ರಮವಲ್ಲ. ಇದರ ಜತೆಗೆ ತಕರಾರಿಗೆ ಸಂಬಂಧಿಸಿದಂತೆ ಏನು ಆದೇಶ ನೀಡಲಾಯಿತು ಎಂಬುದೂ ನಮಗೆ ಗೊತ್ತಾಗಿಲ್ಲ. ಆದೇಶ ಪ್ರತಿಯನ್ನೂ ನೀಡಿಲ್ಲ‘ ಎಂದು ಅರುಣ್ ಹಿರೇಹಾಳ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.