ಕೊಟ್ಟೂರು: ಕಳೆದ ನಾಲ್ಕೈದು ವರ್ಷಗಳ ಹಿಂದೆ ತಾಲ್ಲೂಕು ಕೇಂದ್ರವೆಂದು ಘೋಷಿಸಿದರೂ ಪೂರ್ಣ ಪ್ರಮಾಣದಲ್ಲಿ ಕಚೇರಿಗಳನ್ನು ತೆರೆಯದ ಕಾರಣ ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಂದ ಸಾರ್ವಜನಿಕರು ವಂಚಿತರಾಗುತ್ತಿದ್ದಾರೆ ಎಂದು ಸಿಪಿಐ (ಎಂಎಲ್) ತಾಲ್ಲೂಕು ಘಟಕದ ಕಾರ್ಯದರ್ಶಿ ಗುಡಿಯಾರ್ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಜಿ.ಕೆ.ಅಮರೀಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿ, ಬಳಿಕ ಮಾತನಾಡಿದ ಅವರು, ‘ಕಚೇರಿಗಳನ್ನು ತೆರೆಯದ ಕಾರಣ ಪಕ್ಕದ ಕೂಡ್ಲಿಗಿ ಕಚೇರಿಗಳಿಗೆ ಜನರು ಅಲೆಯುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪಟ್ಟಣದಲ್ಲಿ ಪದವಿ ಕಾಲೇಜು ತೆರೆಯದ ಕಾರಣ ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಓದುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಪರಿಸ್ಥಿತಿ ಹೇಳುವಂತಿಲ್ಲ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು, ತಾಲ್ಲೂಕಿನ ಕೆರೆಗಳ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸಬೇಕು, ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಙ ವೈದ್ಯರ ನೇಮಕ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಸಿದರು.
ಗುಡದಯ್ಯ, ರಾಮನಗೌಡ ಬೋರನಹಳ್ಳಿ, ಟಿ.ಅಜ್ಜಪ್ಪ, ಕೂಡ್ಲಿಗಿ ಪರಸಪ್ಪ, ಕರಿಬಸಯ್ಯಸ್ವಾಮಿ, ಡಿಎಸ್ಎಸ್ ಮುಖಂಡ ಚಂದ್ರಶೇಖರ, ಅಂಜಿನಮ್ಮ, ಸಿದ್ಧಮ್ಮ, ಗುಡಿಯಾರ ಚಿಕ್ಕಪ್ಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.