ಮರಿಯಮ್ಮನಹಳ್ಳಿ: ‘ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ‘ಪ್ರಜಾವಾಣಿ; ಪತ್ರಿಕೆಯು ರಾಜ್ಯ, ದೇಶ ಒಂದೇ ಅಲ್ಲಾ, ಜಗತ್ತಿನಾದ್ಯಂತ ಪತ್ರಿಕೋದ್ಯಮಕ್ಕೆ ತನ್ನದೇ ಆದ ಹಿರಿಮೆಯನ್ನು ತಂದು ಕೊಟ್ಟ ಪತ್ರಿಕೆಯಾಗಿದೆ. ಅದರಲ್ಲೂ ರಂಗಭೂಮಿಗೆ ನೀಡಿದ ಕೊಡುಗೆ ದೊಡ್ಡದು’ ಎಂದು ಸಾಹಿತಿ ಲಲಿತಾ ಹೊಸಪ್ಯಾಟಿ ಹೇಳಿದರು.
ಸ್ಥಳೀಯ ದುರ್ಗಾದಾಸ್ ಕಲಾಮಂದಿರದಲ್ಲಿ ಶನಿವಾರ ರಾತ್ರಿ ‘ಪ್ರಜಾವಾಣಿ @75’ ಅಂಗವಾಗಿ ಹಮ್ಮಿಕೊಂಡಿದ್ದ ಮಾತಾ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನ ಮತ್ತು ಜಾನಪದ ಸಂಗೀತ ಹಾಗೂ ಜೋಗತಿ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚರಿತ್ರೆ ಮನುಷ್ಯನನ್ನು ಮುಂದೊಂದು ದಿನ ಬದಿಗಿಡಬಹುದು, ಆದರೆ ಮನುಷ್ಯ ಮಾಡಿದ ಸಾಧನೆಗಳ ಅಕ್ಷರ ರೂಪ, ಅಕಾರ ಎಂದಿಗೂ ಮರೆಯುದಿಲ್ಲ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದ್ದು, ಅದರಲ್ಲೂ ಸಮಾಜದಲ್ಲಿ ಅತ್ತ ಹೆಣ್ಣು, ಗಂಡು ಅಲ್ಲದ ಮಂಜಮ್ಮ ಜೋಗತಿ ಸವೆಸಿದ ಹಾದಿ ನಿಜಕ್ಕೂ ದೊಡ್ಡದು ಎಂದರು.
ಮಂಜಮ್ಮ ಜೋಗತಿ ಮಾತನಾಡಿ, ‘ಸಾಮಾನ್ಯ ಜೋಗತಿ ಕಲಾವಿದೆಯಾದ ನನ್ನನ್ನು ಹಿಂದಿನಿಂದ ಇಲ್ಲಿಯವರೆಗೆ ಸೇರಿದಂತೆ ಪದ್ಮಶ್ರೀ ಪ್ರಶಸ್ತಿ ಪಡೆಯುವಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ದೊಡ್ಡದಿದ್ದು, ಅದರಲ್ಲೂ ‘ಪ್ರಜಾವಾಣಿ’ಯ ಕೊಡುಗೆ ಅಪಾರ’ ಎಂದರು.
ವಿಜಯನಗರ ಜಿಲ್ಲೆಯ ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಶಶಿಕಾಂತ ಎಸ್.ಶಂಬೆಳ್ಳಿ ಮಾತನಾಡಿ, ‘ಕಳೆದ 75 ವರ್ಷದಿಂದ ಪತ್ರಿಕೆ ಸಮಾಜ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅದರಲ್ಲೂ ಮಂಜಮ್ಮ ಜೋಗತಿ ಅವರು ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣ’ ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಎಂ.ಎಸ್.ಮೃತ್ಯುಂಜಯ, ರಂಗ ನಿರ್ದೇಶಕ ಬೇಲೂರು ರಘುನಂದನ್, ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಮಾತನಾಡಿದರು.
ರಾಮಕ್ಕ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಎಚ್.ಎಸ್.ಗುರುಪ್ರಸಾದ್ ಸ್ವಾಗತಿಸಿದರೆ, ಸರದಾರ್ ವಂದಿಸಿದರು. ಪುಷ್ಪಾ ನಿರೂಪಿಸಿದರು. ನಂತರ ಮಹಾಂತೇಶ ಸಂಗಡಿಗರಿದಂತೆ ಜಾನಪದ ಸಂಗೀತ ಹಾಗೂ ರಾಮವ್ವ ಜೋಗತಿ ಸಂಗಡಿಗರಿಂದ ಜೋಗತಿ ನೃತ್ಯ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.