ಹೊಸಪೇಟೆ: ಮೂರುಗೇರಿ, ಊರಮ್ಮನ ಬಯಲು ಹಾಗೂ ಜಗಳಿಕಟ್ಟೆರಾಯನ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯರು ‘ಸ್ಲಂ ಜನಾಂದೋಲನ ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ಇಲ್ಲಿನ ಬುಧವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಮೂರು ಕೊಳೆಗೇರಿ ಪ್ರದೇಶಗಳಲ್ಲಿ 40 ವರ್ಷಗಳಿಂದ ಜನ ವಾಸಿಸುತ್ತಿದ್ದಾರೆ. ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಇಲ್ಲ. ಹಂದಿಗಳ ಹಾವಳಿ ಮಿತಿ ಮೀರಿದೆ. ಅಸ್ವಚ್ಛತೆಯಿಂದ ಡೆಂಗಿ, ಮಲೇರಿಯಾ ರೋಗ ಉಲ್ಬಣಿಸಿದೆ. ಜನ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ನಗರಸಭೆ ಅಗತ್ಯ ಸೌಕರ್ಯ ಕಲ್ಪಿಸಿ, ಸ್ವಚ್ಛತೆ ಕಾಪಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ದೇವಮ್ಮ, ಹಸೀನಾ, ಫಕೀರಪ್ಪ, ಆಶಿಯಾ, ತಾಯಮ್ಮ, ಮುನ್ನಿ, ರಮೀಜಾ, ಜಬೀನಾ ಇದ್ದರು.