ಕುಡತಿನಿ (ತೋರಣಗಲ್ಲು): ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಲ್ಲಿನ ವಿಶ್ವಕರ್ಮ ಸಮಾಜದ ಬಡ ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ವಿಶೇಷ ಕೌಶಲಾಭರಿತ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಕುಡತಿನಿಯ ವಿಶ್ವಕರ್ಮ ಸಮಾಜದ ಸೇವಾ ಟ್ರಷ್ಟ್ ನ ಅಧ್ಯಕ್ಷ ನಾಗಲಿಂಗ ಆಚಾರಿ ಒತ್ತಾಯಿಸಿದರು.
ಇಲ್ಲಿನ ವಿಶ್ವಕರ್ಮ ಸಮಾಜದ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಗದ್ಗುರು ಕಾಳಹಸ್ತೇಂದ್ರ ಸ್ವಾಮಿಗಳ 90ನೇ ವರ್ಷದ ಆರಾಧನ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕುಡತಿನಿ ಪಟ್ಟಣದಲ್ಲಿನ ವಿಶ್ವಕರ್ಮ ಸಮಾಜದ ಬಡ ಜನರ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ನೆರವೇರಿಸಲು ಪಟ್ಟಣ ಪಂಚಾಯಿತಿಯವರು ಸರ್ಕಾರದ ಅನುದಾನದಲ್ಲಿ ನೂತನ ಸಮುದಾಯ ಭವನ ನಿರ್ಮಿಸಬೇಕು’ ಎಂದರು.
ವಿಶ್ವಕರ್ಮ ಜಗದ್ಗುರು ಕಾಳಹಸ್ತೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವದ ಅಂಗವಾಗಿ ಭಕ್ತಾಧಿಗಳಿಂದ ಸ್ವಾಮಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.
ಸಮಾಜದ ಮುಖಂಡರಾದ ಪಿ.ಜಗದೀಶ್, ಹನುಮೇಶ್, ವೀರಭದ್ರಪ್ಪ, ಮೌನೇಶ್, ವಿರೇಶ್, ಕಾಳಪ್ಪ, ಬ್ರಮ್ಮಯ್ಯ ಭಾಗವಹಿಸಿದ್ದರು.