ತೆಕ್ಕಲಕೋಟೆ: ಸಮೀಪದ ಗೋಸಬಾಳು ಗ್ರಾಮದಲ್ಲಿ ಕುರುಬರ ಆರಾಧ್ಯ ದೈವ ಪಂಚಲಿಂಗೇಶ್ವರ, ಬಿಳಿಗುದಿರೇಶ್ವರ, ಮರಿಗುದಿರೇಶ್ವರ ದೇವರ ಉತ್ಸವ ಬುಧವಾರ ಭಕ್ತಿಭಾವದೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.
ಹಬ್ಬದಂದು ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದ ಮೂಲಕ ವೇದಾವತಿ ಹಗರಿ ನದಿಗೆ ತೆರಳಿ, ಗಂಗಾ ಪೂಜೆ ನೆರೆವೇರಿಸಿ, ಕಂಬಳಿ ಗದ್ದುಗೆ ಹಾಕಿ ದೇವರನ್ನು ಸ್ಥಾಪಿಸಿದರು.
ಛತ್ರ, ಚಾಮರಗಳಿಂದ ಅಲಂಕರಿಸಿ ವಿಶೇಷ ಪೂಜೆ ನಂತರ ಗ್ರಾಮದ ಹಾಲುಮತ ಬಾಂಧವರು ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು.
ಸಂಜೆ ಪಂಚಲಿಂಗೇಶ್ವರ ದೇವರ ಮನೆ ಓಣಿಯಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಸ್ಥಾಪಿಸಿ ಮೆರವಣಿಗೆ ಮೂಲಕ ಡೊಳ್ಳಿನ ಪದಗಳನ್ನು ಹಾಡುತ್ತಾ ಸಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ತೆರಳಿ ಗ್ರಾಮದ ಎಲ್ಲಾ ದೇವತೆಗಳಿಗೆ ಕಾಯಿ ಕರ್ಪೂರ ಅರ್ಪಿಸಿ ಮರಳಿ ದೇವಸ್ಥಾನಕ್ಕೆ ಹೋಗಿ ಮರು ಪ್ರತಿಷ್ಠಾಪನೆ ಮಾಡಿದರು.
ಪಾಡ್ಯ ದಿನದ ರಾತ್ರಿ ಪಟ್ಟದ ಪೂಜಾರಿಯಿಂದ ಬತ್ತಿ ನುಂಗುವ (ಬೆಂಕಿ) ಕಾರ್ಯಕ್ರಮ, ಮುಳ್ಳಿನ ಹಲಗೆ ಮೇಲೆ ನಿಲ್ಲುವುದು, ಕತ್ತಿಯ ಅಲಗನ್ನು ಮೈ ಮೇಲೆ ಹೊಡೆದುಕೊಳ್ಳವ ಪವಾಡ ಕಾರ್ಯಕ್ರಮ ಜರುಗಿದವು.
ಗುರುವಿನ ರೇವಣಸಿದ್ಧ, ಪಟ್ಟದ ಪೂಜಾರಿ ಗೋವಿಂದಪ್ಪ ಮರಿಸ್ವಾಮಿ, ಕಾರಮಂಚಪ್ಪ, ಸೋಮಲಿಂಗ ಜಿ, ಎಚ್ ಮಂಜುನಾಥ, ಕೆ ಸಿದ್ಧಪ್ಪ, ಕೆ ಅಯ್ಯಣ್ಣ ಸೇರಿದಂತೆ ಕರೂರು, ಮೈಲಾಪುರ, ಬಲಕುಂದಿ, ಸೀಮಾಂಧ್ರದ ಗುಳ್ಳಂ, ಉಣೇನೂರು, ಎಮ್ಮಿಗನೂರು ಗ್ರಾಮಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.