ಬಳ್ಳಾರಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹಳ್ಳ, ಕೆರೆ, ಕಾಲುವೆಗಳು ತುಂಬಿ ಹರಿದಿವೆ.
ಜೂನ್ ತಿಂಗಳ 2ನೇ ತಾರೀಕಿನ ವಾಡಿಕೆ ಮಳೆ 0.22 ಸೆಂಟಿ ಮೀಟರ್. ಆದರೆ, ಸುರಿದಿದ್ದು ಮಾತ್ರ 3.6 ಸೆಂ.ಮೀ. ಹೀಗಾಗಿ ಇದು ವಾಡಿಕೆಗಿಂತಲೂ ಅಧಿಕ ಮಳೆ ಎನಿಸಿಕೊಂಡಿದೆ. ಬಳ್ಳಾರಿಯ ಹಗರಿ ನದಿ, ಸಂಡೂರಿನ ನಾರಿಹಳ್ಳಕ್ಕೆ ನೀರು ಹರಿದು ಮಂದಿದೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ನ ರಾಜಾಪುರ, ಉಬ್ಬಳಗಂಡಿ ಕೆರೆರಾಂಪುರ ಗ್ರಾಮಗಳೂ ಸೇರಿದಂತೆ ಹಲವು ಗ್ರಾಮಗಳಲ್ಲಿ 15 ಮನೆಗಳಿಗೆ ಭಾಗಶಃ ಹಾನಿಯಾಗಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಕಚೇರಿಗಳಿಗೂ ನೀರು: ಮಳೆಯಿಂದಾಗಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣ, ಹಳೇ ತಾಲ್ಲೂಕು ಕಚೇರಿ ಆವರಣ, ಶಾಲೆ, ಕಾಲೇಜುಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಬಳ್ಳಾರಿಯ ಕೊಳೆಗೇರಿಗಳಲ್ಲಿ ಚರಂಡಿಗಳು ತುಂಬಿ ತ್ಯಾಜ್ಯದ ನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ರಾತ್ರಿಯೆಲ್ಲ ನಿದ್ದೆಗೆಟ್ಟು ಚರಂಡಿ ನೀರನ್ನು ಮನೆಯಿಂದ ಹೊರಗೆ ಚೆಲ್ಲುವಂತಾಯಿತು.
ವಿದ್ಯುತ್ ಕಟ್: ಮಳೆಯಿಂದಾಗಿ ಹಲವೆಡೆ ಮರಗಳು ಧರೆಗೆ ಉರುಳಿದ್ದರಿಂದ ನಗರದ ಪ್ರದೇಶದಲ್ಲಿ ಭಾನುವಾರ ರಾತ್ರಿ ಇಡೀ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಜೆಸ್ಕಾಂ ನಡೆಗೆ ನಾಗರಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಬೆಳಗ್ಗೆ 10ರ ಹೊತ್ತಿಗೆ ವಿದ್ಯುತ್ ಸಂಪರ್ಕ ದೊರೆಯಿತು.
ಅಧಿಕ ಮಳೆಯಾದ ಪ್ರದೇಶಗಳು: ಸಂಡೂರಿನ ವಿಠಲಾಪುರ, ಬಳ್ಳಾರಿಯ ಮೋಕಾ ಗ್ರಾಮದ ಮಳೆ ಮಾಪನ ಕೇಂದ್ರದಲ್ಲಿ 10 ಸೇ. ಮೀ.ಗಿಂತಲೂ ಅಧಿಕ ಪ್ರಮಾಣದ ಮಳೆಯಾಗಿದೆ. ಸಿರುಗುಪ್ಪ ತಾಲೂಕಿನ ಕೆ. ಬೆಳಗಲ್ಲು ಎಂಬಲ್ಲಿ 7.50 ಸೆ.ಮೀ, ಸಂಡೂರಿನ ಕುರಕುಪ್ಪದಲ್ಲಿ 7 ಸೆ.ಮೀ, ಚೋರನೂರು ಹೋಬಳಿಯಲ್ಲಿ 6.6 ಸೆ. ಮೀ ಮಳೆಯಾಗಿದೆ.
ತಾಲೂಕುವಾರು ಮಳೆ ವಿವರ (ಜೂನ್ 2ನೇ ತಾರೀಕಿನಂತೆ)
ಬಳ್ಳಾರಿ;0.48; 2.72 ಸಂಡೂರು;0.14;5.76 ಸಿರುಗುಪ್ಪ; 0.16;2.54 ಕುರುಗೋಡು;0.14;3.10 ಸರಾಸರಿ;0.22;3.6 (ಸೆಂ.ಮೀಗಳಲ್ಲಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.