ಬಳ್ಳಾರಿ: ಬಳ್ಳಾರಿಯ ಏಕಶಿಲಾ ಬೆಟ್ಟಕ್ಕೆ ‘ರೋಪ್ ವೇ’ ಅಳವಡಿಸುವ ಸಂಬಂಧ ಮುಂಬೈ ಮೂಲದ ತಜ್ಞರ ತಂಡವೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿ ಹೋಗಿದೆ.
’ಟಿಪ್ಪು ಸುಲ್ತಾನ್ ಕೋಟೆ‘ಗೆ ಎಂದೂ ಕರೆಯಲಾಗುವ ಬೆಟ್ಟಕ್ಕೆ ರೋಪ್ವೇ ಅಳವಡಿಸುವ ಸಂಬಂಧ ಜಿಲ್ಲಾಡಳಿತ ಮತ್ತು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದ್ದರು. ಜತೆಗೆ, ಕಳೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಶಾಸಕ ಭರತ್ ರೆಡ್ಡಿ ಈ ವಿಷಯವನ್ನು ಸದನದಲ್ಲಿಯೇ ಪ್ರಸ್ತಾಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರವಾಸೋದ್ಯಮ ಸಚಿವರು ಅಧ್ಯಯನಕ್ಕಾಗಿ ಇಲಾಖೆಯಿಂದ ತಜ್ಞರ ತಂಡವನ್ನು ಕಳುಹಿಸುವುದಾಗಿ ತಿಳಿಸಿದ್ದರು. ಅದರಂತೆ ಅಧ್ಯಯನ ತಂಡವು ಫೆ.3ರಂದು ರಂದು ಬಳ್ಳಾರಿಗೆ ಭೇಟಿ ನೀಡಿದ್ದು, 2 ದಿನಗಳ ಕಾಲ ಅಧ್ಯಾಯನ ನಡೆಸಿದೆ. ಕೋಟೆಯ ಡ್ರೋಣ್ ವಿಡಿಯೊ ಮಾಡಿರುವ ತಂಡ, ಸ್ಥಿರ ಚಿತ್ರಗಳನ್ನೂ ಸಂಗ್ರಹಿಸಿಕೊಂಡಿದೆ.
ಮುಂಬೈ ಮೂಲದ ಖಾಸಗಿ ಕಂಪನಿಯ ಭರತ್ ಜೈನ್ ಎಂಬುವವರ ನೇತೃತ್ವದಲ್ಲಿ ಸಮೀಕ್ಷೆ ನಡೆದಿದೆ ಎನ್ನಲಾಗಿದೆ.