ತೋರಣಗಲ್ಲು: ಹೋಬಳಿಯ ಕುರೆಕುಪ್ಪ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ರೈತ ಕೆ.ಹೆಮಗಿರಿಯಪ್ಪ ಅವರಿಗೆ ಸೇರಿದ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟವುಂಟಾದ ಘಟನೆ ಭಾನುವಾರ ನಡೆದಿದೆ.
ಜಿಂದಾಲ್ ಕಾರ್ಖಾನೆಯ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸುಮಾರು 40 ಟ್ರ್ಯಾಕ್ಟರ್ಗಳಷ್ಟು ಹುಲ್ಲನ್ನು ಸಂಗ್ರಹಿಸಲಾಗಿತ್ತು. ಸುಮಾರು ₹3 ಲಕ್ಷ ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.
‘ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿರುವ ಪ್ರಾಥಮಿಕ ವರದಿಯನ್ನು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರಕ್ಕಾಗಿ ಉನ್ನತ ಅಧಿಕಾರಿಗಳಿಗೆ ವರದಿಯನ್ನು ಶೀಘ್ರವಾಗಿ ರವಾನಿಸಲಾಗುವುದು’ ಎಂದು ತೋರಣಗಲ್ಲು ಹೋಬಳಿಯ ಕಂದಾಯ ನಿರೀಕ್ಷಕ ಗಣೇಶ್ ಪ್ರತಿಕ್ರಿಯಿಸಿದರು.