ಕಂಪ್ಲಿ: ‘ಬಹುಪರಾಕ್ ಬಹು ಎಚ್ಚರ, ಭೂಮಿ ತಾಯಿ ಬಾಯಿ ತೆಗೆದಾಳು, ಪಾರ್ವತಿ ಪರಶಿವನು ಗಂಗೆಗಾಗಿ ಸಮುದ್ರಕ್ಕೆ ಪೂಜೆ ಮಾಡ್ಯಾರ, ಕೆಂಪು ಕುದುರೆ ಕುಣಿಯುತ್ತ ಕುಣಿಯುತ್ತ ಗಗನಕ್ಕೆ ಹಾರೀತು, ಆರು ಮೂರು ಆದೀತು ಮೂರು ಆರು ಆದೀತು...’
ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಅರ್ಚಕ ಎಚ್.ಪಿ. ವಿರುಪಾಕ್ಷಿ ಅವರು ಮಂಗಳವಾರ ಅಗ್ನಿಕುಂಡ ಹಾಯುವ ಮುನ್ನ ಕಾರ್ಣಿಕೋತ್ಸವದಲ್ಲಿ ಹೇಳಿದ ಭವಿಷ್ಯವಾಣಿ ಇದು.
‘ಎಚ್ಚರದಿಂದ ಜೀವನ ಸಾಗಿಸಬೇಕು. ಮಳೆ ಇಲ್ಲದೆ ಭೂಮಿ ಒಣಗುತ್ತದೆ. ಮಳೆಗಾಗಿ ಪೂಜೆ ಕೈಗೊಳ್ಳಬೇಕು. ಗಿಡ–ಮರಗಳನ್ನು ಸಂರಕ್ಷಿಸಬೇಕು. ಕೆಂಪು ಮೆಣಸಿನಕಾಯಿ ಸೇರಿದಂತೆ ಕೆಂಪು ಬಣ್ಣದ ಧಾನ್ಯಗಳ ಇಳುವರಿ ಕೊರತೆಯಾಗಿ ದರ ಗಗನಕ್ಕೇರುತ್ತದೆ. ರೈತರ ಬೆಳೆಗೆ ಮೊದಲಿಗೆ ದರ ಇದ್ದು ನಂತರ ಕಡಿಮೆಯಾಗಿ ಮತ್ತೆ ಏರಿಕೆ ಕಾಣುತ್ತದೆ’ ಎಂದು ನೆರೆದಿದ್ದ ಜನರು ವ್ಯಾಖ್ಯಾನಿಸಿದರು.
ತಡರಾತ್ರಿವರೆಗೆ ಅಗ್ನಿಕುಂಡ ಹಾಯುವುದು, ತನುಗೊಡ ತರುವುದು, ಪಲ್ಲಕ್ಕಿ, ಗಂಗೆಸ್ಥಳ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸುಗ್ಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ. ಲೋಕೇಶ್, ಸದಸ್ಯ ತಿಪ್ಪಯ್ಯ, ಮೌಲಸಾಬ್, ಹೊನ್ನೂರಸಾಬ್, ವಿ. ಹನುಮಯ್ಯ, ಬಿ. ರಾಮಾಂಜನೇಯಲು, ಅಂಜಿನಪ್ಪ, ಮಾಯಪ್ಪ, ನಾಗರಾಜ, ತಿಮ್ಮಪ್ಪ, ಸೋಮಪ್ಪ, ತಿಮ್ಮಾರೆಡ್ಡಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.