ಬಳ್ಳಾರಿ: ನಗರದ ಎಸ್.ಪಿ ಸರ್ಕಲ್ ಬಳಿ ಶನಿವಾರ ರಾತ್ರಿ ಮೂರ್ಚೆ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬಿಜೆಪಿ ನಾಯಕ ಬಿ. ಶ್ರೀರಾಮುಲು ಆರೈಕೆ ಮಾಡಿ, ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಶನಿವಾರ ನಡೆದ ಬಳ್ಳಾರಿಯ ಕೋಟೆ ಮಲ್ಲೇಶ್ವರ ರಥೋತ್ಸವದಲ್ಲಿ ಶ್ರೀರಾಮುಲು ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೊರಟಿದ್ದಾಗ ರಸ್ತೆಯಲ್ಲಿ ಮಹೇಶ್ ಎಂಬಾತ ಬಿದ್ದು ಒದ್ದಾಡುತ್ತಿದ್ದರಿಂದ ಕೂಡಲೇ ಅವರ ಬಳಿಗೆ ಧಾವಿಸಿದ ರಾಮುಲು, ಮನೆಯೊಂದರ ಬಳಿಗೆ ಹೊತ್ತೊಯ್ದ ಆರೈಕೆ ಮಾಡಿದ್ದಾರೆ.
ನಂತರ ಅವರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಸಿ, ಹಣಕಾಸಿನ ನೆರವು ನೀಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಶ್ರೀರಾಮುಲು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.