ಹಗರಿಬೊಮ್ಮನಹಳ್ಳಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಾಯ್ಡು ಅಭಿಮಾನಿ ಬಳಗ ಮತ್ತು ಸಹಮತ ವೇದಿಕೆಯ ನೂರಾರು ಜನ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆಯ ಮುಖಂಡ ಎ.ಆಂಜನೇಯ ಮಾತನಾಡಿ, ಚಂದ್ರಬಾಬು ನಾಯ್ಡು ಅವರನ್ನು ಅಕ್ರಮವಾಗಿ ಬಂಧಿಸಿರುವುದು ಖಂಡನೀಯ, ಅವರು ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮನೆಮಾತಾಗಿದ್ದರು. ಆದ್ದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಮಹಿಳೆಯರು ಸೇರಿದಂತೆ ಹಲವರು ಈಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದವರೆಗೂ ಬಂದು ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆಯ ಅಧ್ಯಕ್ಷ ಎಸ್.ಚಂದ್ರಶೇಖರ್, ಕಾರ್ಯಾಧ್ಯಕ್ಷ ವಿ.ಸುಬ್ಬರಾವ್, ಉಪಾಧ್ಯಕ್ಷ ಕಾಳೇಶ್ವರರಾವ್, ಮುಖಂಡರಾದ ಜಿ.ವೆಂಕಟೇಶ್, ಸಿ.ಎಚ್.ವೆಂಕಟೇಶ್ವರರಾವ್, ಕೆ.ಸುರೇಶ್, ಕೆ.ನಾಗೇಶ್ವರರಾವ್ ಇದ್ದರು.