ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಾದರೂ ಮೌಲ್ಯಮಾಪನದ ಭತ್ಯೆಯಿಲ್ಲ

12 ಸಾವಿರ ಪಿ.ಯು. ಉಪನ್ಯಾಸಕರಿಗೆ ಭತ್ಯೆ ಕೊಡದ ಪಿ.ಯು. ಮಂಡಳಿ
Last Updated 1 ಜುಲೈ 2018, 15:07 IST
ಅಕ್ಷರ ಗಾತ್ರ

ಹೊಸಪೇಟೆ: ದ್ವಿತೀಯ ಪಿ.ಯು.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸ ನಿರ್ವಹಿಸಿದ ರಾಜ್ಯದ 12 ಸಾವಿರಕ್ಕೂ ಅಧಿಕ ಉಪನ್ಯಾಸಕರಿಗೆ ಮೂರು ತಿಂಗಳಾದರೂ ಭತ್ಯೆ ನೀಡಿಲ್ಲ.

ಎರಡು ವಾರಗಳ ವರೆಗೆ ನಡೆದ ಮೌಲ್ಯಮಾಪನ ಕೆಲಸದಲ್ಲಿ ರಾಜ್ಯದ 12 ಸಾವಿರಕ್ಕೂ ಅಧಿಕ ಉಪನ್ಯಾಸಕರು ಪಾಲ್ಗೊಂಡಿದ್ದರು. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನ ಮಾಡಿದ್ದರು. ಒಬ್ಬರಿಗೆ ತಲಾ ₨20 ಸಾವಿರ ಭತ್ಯೆ ನೀಡಬೇಕು. ಮಾ. 20ಕ್ಕೆ ಮೌಲ್ಯಮಾಪನ ಪೂರ್ಣಗೊಂಡಿದೆ. ಆದರೆ, ಇದುವರೆಗೆ ಭತ್ಯೆ ಕೊಟ್ಟಿಲ್ಲ.

ಈ ಹಿಂದೆ ಮೌಲ್ಯಮಾಪನ ಮುಗಿದ ಕೊನೆಯ ದಿನ ಆಯಾ ಉಪನ್ಯಾಸಕರಿಗೆ ಚೆಕ್‌ ಮೂಲಕ ಭತ್ಯೆ ಕೊಡಲಾಗುತ್ತಿತ್ತು. ಈಗ ಆರ್‌.ಟಿ.ಜಿ.ಎಸ್‌. ಮೂಲಕ ಪಾವತಿಸಲು ಪಿ.ಯು. ಮಂಡಳಿ ಮುಂದಾಗಿದೆ. ಆದರೆ, ಇದುವರೆಗೆ ಯಾರಿಗೂ ಭತ್ಯೆ ಕೊಟ್ಟಿಲ್ಲ. ಇದೇ 29ರಿಂದ ಪೂರಕ ಪರೀಕ್ಷೆಗಳು ಆರಂಭವಾಗಿದ್ದು, ಮತ್ತೆ ಆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದೆ.

ಅತಿ ಕಡಿಮೆ ಸಂಬಳದಲ್ಲಿ ದುಡಿಯುವ ಅನುದಾನ ರಹಿತ ಕಾಲೇಜಿನ ಉಪನ್ಯಾಸಕರು ಬೇರೆ ನಗರಗಳಿಗೆ ಹೋಗಿ, ಹೋಟೆಲ್‌ಗಳಲ್ಲಿ ಉಳಿದುಕೊಂಡು ಕೆಲಸ ಮಾಡಿದ್ದಾರೆ. ಸಕಾಲಕ್ಕೆ ಹಣ ಪಾವತಿಯಾಗದ ಕಾರಣ ಅವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೌಲ್ಯಮಾಪನದ ಭತ್ಯೆಯನ್ನು ಬಡ್ಡಿ ಸಮೇತ ಕೊಡದಿದ್ದ ಪಕ್ಷದಲ್ಲಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಉಪನ್ಯಾಸಕರು ಚಿಂತನೆ ನಡೆಸಿದ್ದಾರೆ.

‘ಉಪನ್ಯಾಸಕರು ಅತ್ಯಂದ ದಕ್ಷತೆಯಿಂದ ಮೌಲ್ಯಮಾಪನ ಕೆಲಸ ನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಿದ್ದಾರೆ. ಫಲಿತಾಂಶ ವೃದ್ಧಿಯಾಗಲು ಶ್ರಮಿಸಿದ್ದಾರೆ. ಉಪನ್ಯಾಸಕರಿಂದ ಪಿ.ಯು. ಮಂಡಳಿಗೆ ಪ್ರಶಂಸೆಯ ಸುರಿಮಳೆ ಹರಿದು ಬಂದಿದೆ. ಆದರೆ, ಮಂಡಳಿ ಮಾತ್ರ ಉಪನ್ಯಾಸಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅನುದಾನರಹಿತ ಕಾಲೇಜಿನ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಹಾಗೂ ಅನುದಾನ ಸಹಿತ ಕಾಲೇಜಿನ ಉಪನ್ಯಾಸಕರಿಗೆ ಕೈತುಂಬ ಸಂಬಳ ಸಿಗುತ್ತದೆ. ಅನುದಾನರಹಿತ ಕಾಲೇಜಿನ ಉಪನ್ಯಾಸಕರು ಕಡಿಮೆ ವೇತನದಲ್ಲಿ ದುಡಿಯುತ್ತಾರೆ. ಬೇರೆ ನಗರಕ್ಕೆ ತೆರಳಿ, ಸ್ವಂತ ದುಡ್ಡು ಖರ್ಚು ಮಾಡಿ ಕೆಲಸ ಮಾಡಿದ್ದಾರೆ. ಮೂರು ತಿಂಗಳಿಂದ ಭತ್ಯೆ ಕೊಡದ ಕಾರಣ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಪೂರಕ ಪರೀಕ್ಷೆಗಳ ಮೌಲ್ಯಮಾಪನ ಬಹಿಷ್ಕರಿಸುವ ಸಂಬಂಧ ಉಪನ್ಯಾಸಕರ ಸಂಘದಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಈ ಹಿಂದಿನ ವ್ಯವಸ್ಥೆಯೇ ಸರಿಯಾಗಿ ಇತ್ತು. ಮೌಲ್ಯಮಾಪನದ ಕೊನೆಯ ದಿನ ಸ್ಥಳದಲ್ಲೇ ಚೆಕ್‌ ಕೊಡುತ್ತಿದ್ದರು. ಆರ್‌.ಟಿ.ಜಿ.ಎಸ್‌. ಮೂಲಕ ಹಣ ಪಾವತಿಸಲಾಗುವುದು ಎಂದು ಮಂಡಳಿ ತಿಳಿಸಿತ್ತು. ಆದರೆ, ಇದುವರೆಗೆ ನೀಡಿಲ್ಲ’ ಎಂದು ಕಮಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ದಯಾನಂದ ಕಿನ್ನಾಳ್‌, ಟಿ.ಬಿ. ಡ್ಯಾಂ ಪಿಯು ಕಾಲೇಜಿನ ಉಪನ್ಯಾಸಕ ಸಮದ್‌ ಕೊಟ್ಟೂರು ತಿಳಿಸಿದರು.

ಈ ಕುರಿತು ಪಿ.ಯು. ಪರೀಕ್ಷಾ ಮಂಡಳಿಯ ನಿರ್ದೇಶಕಿ ಸಿ. ಶಿಖಾ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT