ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಮಟ್ಟಿಪ್ರದೇಶದ ಕಾಳಪ್ಪನ ಹೊಲದಲ್ಲಿದ್ದ ಕುರಿ ಮಂದೆ ಮೇಲೆ ಭಾನುವಾರ ದಾಳಿ ನಡೆಸಿದ ಚಿರತೆಯೊಂದು ಎರಡು ಕುರಿಗಳನ್ನು ಸಾಯಿಸಿದೆ.
ಮೃತಪಟ್ಟಿರುವ ಎರಡು ಕುರಿಗಳು ಗೊಲ್ಲರ ಕಾಳಪ್ಪ ಅವರಿಗೆ ಸೇರಿದ್ದು, ಸುಮಾರು ₹25 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿದ ಮೆಟ್ರಿ ಗ್ರಾಮದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ಪ್ರದೀಪ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಚಿರತೆ ದಾಳಿಯಿಂದ ಎರಡು ಕುರಿಗಳು ಮೃತಪಟ್ಟಿವೆ ಎಂದು ದೃಢಪಡಿಸಿದ್ದಾರೆ.
ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಗಗೊಂಡಿದ್ದು, ಸೆರೆಗೆ ಬೋನ್ ಅಳವಡಿಸುವಂತೆ ಗ್ರಾಮಸ್ಥರಾದ ವಿ. ಮಾರೇಶ, ಚಂದುಸಾಬ್, ಕಾಳಪ್ಪ, ರಾಜಾ, ಯಲ್ಲಪ್ಪ ಇತರರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೀಟ್ ಫಾರೆಸ್ಟೆರ್ ಬಿ. ರಾಘವೇಂದ್ರ, ಚಿರತೆ ಸೆರೆ ಹಿಡಿಯುವ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.