ಕೊಟ್ಟೂರು: ಆಹಾರವನ್ನರಸಿ ಕಾಡಂಚಿನ ಜಮೀನುಗಳಿಗೆ ಲಗ್ಗೆ ಇಟ್ಟ ಕಾಡು ಹಂದಿಗಳು ಜಮೀನಿನ ಸುತ್ತ ಹಾಕಿದ್ದ ತಂತಿಗಳಲ್ಲಿನ ವಿದ್ಯುತ್ ಸ್ಪರ್ಶದಿಂದ ಎರಡು ಕಾಡು ಹಂದಿಗಳು ಸಾವಿಗೀಡಾಗಿರುವ ಘಟನೆ ಸಮೀಪದ ರಾಂಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಜಮೀನಿನ ಮಾಲೀಕರು ರಕ್ಷಣೆಗೆ ಹಾಕಿದ್ದ ತಂತಿಯಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಕೆ ಮಾಡಿದ್ದರಿಂದ ಕಾಡು ಹಂದಿಗಳು ತಂತಿಯ ಸ್ಪರ್ಶದಿಂದ ಸ್ಥಳದಲ್ಲಿ ಸಾವನ್ನಪ್ಪಿವೆ.
ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಜಮೀನಿನ ಮಾಲೀಕರ ವಿರುದ್ಧ ಅರಣ್ಯ ಇಲಾಖೆಯವರು ದೂರು ದಾಖಲಿಸಿರುವುದಲ್ಲದೇ ಜೆಸ್ಕಾಂ ಇಲಾಖೆಯವರಿಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.